.
ಸತತ ಎಂಟು ಬಾರಿ ಒಂದೇ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಏಕೈಕ ಮಹಿಳಾ ಸಂಸದೆ ಅವರು. ಈ ರೀತಿ ಜನರಿಂದ ಆಯ್ಕೆದ ದೇಶದ ಮೊದಲ ಮಹಿಳೆ ಎಂಬ ಕೀರ್ತಿಯೂ ಅವರದ್ದು. ಈ 'ಜನಪ್ರತಿನಿಧಿ' ಬೇರಾರೂ ಅಲ್ಲ, ಈ ಬಾರಿ ಲೋಕಸಭಾ ಸ್ಪೀಕರ್ ಆಗಿ ನೇಮಕವಾಗಿರುವ ಬಿಜೆಪಿ ಸಂಸದೆ ಸುಮಿತ್ರಾ ಮಹಾಜನ್ !
ಎಪತ್ತೆರಡು ವರ್ಷದ ಫೇರ್ ಲುಕ್ ಹೊಂದಿರುವ ಮೃದು ಭಾಷಿ ಸುಮಿತ್ರಾ. 1989ರಲ್ಲಿ ಮೊದಲ ಬಾರಿ ಇಂದೋರ್ ನಿಂದ ಲೋಕಸಭೆಗೆ ಸ್ಪರ್ಧಿಸಿದ ಅವರು, ಅಂದು ಹಿರಿಯ ಕಾಂಗ್ರೆಸ್ ನಾಯಕ ಪ್ರಕಾಶ್ಚಂದ್ ಸೇಥಿ ಅವರನ್ನು ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲಿಸಿ ಇತಿಹಾಸ ನಿರ್ಮಿಸಿದರು. ಅದಕ್ಕೂ ಮೊದಲು ಅವರು ಇಂದೋರ್ ವಿಧಾನ ಸಭಾ ಕ್ಷೇತ್ರದಿಂದ ಮೂರು ಬಾರಿ ಸ್ಪರ್ಧಿಸಿ ಸೋಲನುಭವಿಸಿದ್ದರು. 1989ರಲ್ಲಿ ಲೋಕಸಭೆಗೆ ಪ್ರವೇಶಿಸಿದ ಬಳಿಕ ಮತ್ತೆಂದೂ ಹಿಂತಿರುಗಿ ನೋಡಲಿಲ್ಲ. ಸತತ ಎಂಟನೇ ಬಾರಿ ಇಂದೋರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹದಿನಾರಲೇ ಲೋಕಸಭಾ ಚುನಾವಣೆಯಲ್ಲಿ ಅವರು ಬರೋಬ್ಬರಿ 466301 ಮತಗಳ ಅಂತರದ ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ.
ಅವರ ಈ ಸಾಧನೆ ಹಿಂದೆ ಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ಮಹಾರಾಷ್ಟ್ರ ಮೂಲದ ಸುಮಿತ್ರಾ ಅವರು ಎಂ.ಎ ಹಾಗೂ ಕಾನೂನು ಪದವಿಯನ್ನು ಇಂದೋರ್ ವಿ.ವಿ.(ಈಗ ಇದು ದೇವಿ ಅಹಲ್ಯಾ ವಿವಿ)ಯಿಂದ ಪಡೆದುಕೊಂಡರು. ಇಂದೋರಿನ ಪ್ರಸಿದ್ಧ ವಕೀಲ ಜಯಂತ್ ಮಹಾಜನ ಅವರನ್ನು ವಿವಾಹವಾದರು. ಸ್ವಭಾವತಃ ಮೃದುಭಾಷಿಯಾಗಿದ್ದ ಕಾರಣ ಸುತ್ತಮುತ್ತಲಿನ ಹಳ್ಳಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದರು. ಹೀಗಾಗಿ ಅವರೆಲ್ಲರಿಗೂ ಇವರು "ತಾಯಿ''(ಮರಾಠಿಯಲ್ಲಿ ಸಹೋದರಿ ಎಂದರ್ಥ)ಯಾದರಲ್ಲದೆ ಆಧುನಿಕ ಅಹಲ್ಯಾ ಬಾಯಿ ಎನಿಸಿಕೊಂಡರು.
ಬಿಜೆಪಿಯ ಹಿರಿಯ ನಾಯಕ ದಿವಂಗತ ರಾಜೇಂದ್ರ ಧರ್ಕರ್ ಗರಡಿಯಲ್ಲಿ ರಾಜಕೀಯ ಕಲಿತ ಸುಮಿತ್ರಾಗೆ ಮುಂದೊಂದು ದಿನ ಅವರೇ ಶತ್ರುವಾದರು. ಆರಂಭದ ವಿರೋಧ ಮನೆಯಿಂದಲೇ ಎದುರಾಗಿತ್ತು. ಪತಿ ಜಯಂತ್ ಅವರ ಹೆತ್ತವರ ವಿರೋಧವನ್ನು ಎದುರಿಸಿ ಸುಮಿತ್ರಾ ರಾಜಕೀಯ ಪ್ರವೇಶಿಸಿದ್ದರು. ಇಂದೋರ್ ನಲ್ಲಿ ಸುಮಿತ್ರಾಗೆ ರಾಜ್ಯದ ನಗರಾಡಳಿತ ಮತ್ತು ಅಭಿವೃದ್ಧಿ ಸಚಿವ ಕೈಲಾಷ್ ವಿಜಯವರ್ಗೀಯ ಮತ್ತು ಉಮಾಭಾರತಿ ಬಹುದೊಡ್ಡ ರಾಜಕೀಯ ಎದುರಾಳಿಗಳು. 1999-2003ರ ಅವಧಿಯಲ್ಲಿ ಸುಮಿತ್ರಾ ಅವರು ವಾಜಪೇಯಿ ಸಂಪುಟದಲ್ಲಿ ಮೂರು ವಿಭಿನ್ನ ಖಾತೆಗಳ ರಾಜ್ಯ ಸಚಿವರಾಗಿದ್ದರು. ಈ ನಡುವೆ ಅವರ ವಿರುದ್ಧ ಪಕ್ಷದೊಳಗಿನ ಬಂಡಾಯ ಹೆಚ್ಚಾಗುತ್ತಲೇ ಇತ್ತು.
ಮಧ್ಯಪ್ರದೇಶದ ಸಿಎಂ ಸ್ಥಾನದಲ್ಲಿ ಸುಮಿತ್ರಾ ಅವರನ್ನು ಕಾಣಬೇಕೆಂದು ಬಯಸಿದ್ದರು ಪತಿ ದಿವಂಗತ ಜಯಂತ್ ಮಹಾಜನ್. ಆ ಕನಸು ನನಸಾಗಿಲ್ಲ. ಆದರೆ, ಎಲ್ಲ ಅಡೆತಡೆಗಳನ್ನು ಎದುರಿಸಿಯೂ ಅವರು ಮುನ್ನಡೆದುದ್ದರಿಂದಲೇ ಅವರಿಂದು ಲೋಕಸಭೆಯ ಎರಡನೇ ಮಹಿಳಾ ಸ್ಪೀಕರ್ ಎಂಬ ಕೀರ್ತಿಗೂ ಅರ್ಹವಾಗಿಯೇ ಭಾಜನರಾಗಿದ್ದಾರೆ.