ಅಮಿತ್ ಷಾ ಮತ್ತು ನರೇಂದ್ರ ಮೋದಿ
ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ ಬೆನ್ನಲ್ಲೆ ಉತ್ತರಪ್ರದೇಶದಲ್ಲಿ ಜನರಲ್ಲೊಂದು ಆಶಾಕಿರಣ ಮೂಡಿದೆ. ಅಮಿತ್ ಷಾ ಉತ್ತರಪ್ರದೇಶದ ಮುಖ್ಯಮಂತ್ರಿಯಾದರೆ ಹೇಗೆ? ಎಂಬ ಮಾತೂ ಅಲ್ಲಿನ ಕಾರ್ಯಕರ್ತರ ಮಟ್ಟದಲ್ಲಿ ಕೇಳಲಾರಂಭಿಸಿದೆ.
ಜನರ ಭಾವನೆಗಳನ್ನು ಗುರುತಿಸಿ ಮಾತನಾಡುವುದೇ ಆದರೆ, ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ರರಪ್ರದೇಶದ ಜನ "ಅಮಿತ್ ಷಾ''ರ ಮೋಡಿಗೆ ಒಳಗಾಗಿದ್ದಾರೆ. ಮೋದಿ ಅವರನ್ನು ಪ್ರಧಾನಿ ಪಟ್ಟಕ್ಕೇರಿಸುವುದಕ್ಕಾಗಿ ನಾಲ್ಕಾರು ತಿಂಗಳ ಮೊದಲೇ ಉತ್ತರಪ್ರದೇಶಕ್ಕೆ ಆಗಮಿಸಿದ್ದ ಷಾ, ನೋಡು ನೋಡುತ್ತಿರುವಂತೆ ಮಿಷನ್ ಉತ್ತರಪ್ರದೇಶವನ್ನು ಗ್ರ್ಯಾಂಡ್ ಸಕ್ಸಸ್ ಮಾಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಅವರ ನಿರೀಕ್ಷೆ 50+ ಇದ್ದಿತ್ತು. ಆದರೆ, ಜನ 70+ ನೀಡಿ ಹರಸಿದರು.
ಕೆಟ್ಟು ಕೆರ ಹಿಡಿದು ಹೋಗಿದ್ದ ಉತ್ತರಪ್ರದೇಶ ಬಿಜೆಪಿ ಕಾರ್ಯಕರ್ತರನ್ನು ಈ ಮಟ್ಟಕ್ಕೆ ಕೆಲಸ ಮಾಡಲು ಹುರಿದುಂಬಿಸಿದ ಶಕ್ತಿ ಯಾವುದು ಎಂದರೆ, ಸೈಲಂಟಾಗಿರುವ ಅಮಿತ್ ಷಾ ಕಡೆಗೆ ಎಲ್ಲರ ಕೈ ಬೊಟ್ಟು ಮಾಡುತ್ತವೆ. 2017ರಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಮುಂದಿನ ವರ್ಷದಿಂದಲೇ ಕವಾಯಿತು ನಡೆಸಬೇಕು. ಲೋಕಸಭಾ ಚುನಾವಣೆ ಪೂರ್ವದಲ್ಲೇ ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂಬುದುದನ್ನು ಘೋಷಿಸಿದಂತೆ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನೂ ಘೋಷಿಸಬೇಕು ಎಂಬ ಮಾತು ಕೂಡಾ ಕೇಳತೊಡಗಿದೆ.
ಉತ್ತರಪ್ರದೇಶದಲ್ಲಿ 403 ವಿಧಾನಸಭಾ ಕ್ಷೇತ್ರಗಳಿದ್ದು, ಪ್ರಸ್ತುತ ಸದಸ್ಯಬಲ 47 ಮಾತ್ರ ಇದೆ. ಮುಂದಿನ ಚುನಾವಣೆಯಲ್ಲಿ "ಮಿಷನ್ 202+'' ಜಾರಿಗೊಳಿಸಿ, 268ಕ್ಕೂ ಅಧಿಕ ಸ್ಥಾನಗೆಲ್ಲುವುದಕ್ಕಾಗಿ ಕೆಲಸ ಮಾಡಬೇಕಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ರಚನೆಯಾದ ಬಳಿಕ ಉತ್ತರಪ್ರದೇಶ ಬಿಜೆಪಿಯ ಸಂಘಟನಾತ್ಮಕ ಪುನಾರಚನೆ ಕೆಲಸ ಆರಂಭವಾಗಲಿದೆ ಎಂಬ ಮುನ್ಸೂಚನೆಯನ್ನು ಪಕ್ಷದ ಸ್ಥಳೀಯ ಪದಾಧಿಕಾರಿಗಳು ನೀಡಿದ್ದಾರೆ.
ಒಟ್ಟಿನಲ್ಲಿ ಲೋಕಸಭಾ ಚುನಾವಣೆಯ ಭರ್ಜರಿ ಗೆಲುವು ಬಿಜೆಪಿ ನಾಯಕರು, ಕಾರ್ಯಕರ್ತರ ಉತ್ಸಾಹ, ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಇದೇ ರೀತಿ ವಿಧಾನ ಸಭಾ ಚುನಾವಣೆಗಳಲ್ಲೂ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟು ಮತಭೇಟೆಗೆ ಸಂಘಟಿತ ಪ್ರಯತ್ನ ಮಾಡಬೇಕೆಂಬ ಮಾತು ಸಂಘ ಪರಿವಾರದಲ್ಲೂ ಕೇಳಿ ಬಂದಿದೆ. ಈ ಮೂಲಕ "ಏಕ್ ಭಾರತ್, ಶ್ರೇಷ್ಠ ಭಾರತ್'' ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮೊದಲ ಮೆಟ್ಟಿಲು ಈ ಚುನಾವಣೆಯಾದೀತೇ ಎಂಬುದೀಗ ಸದ್ಯದ ಪ್ರಶ್ನೆ..