.
ಬದಲಾವಣೆಯ ಯುಗಾರಂಭದಲ್ಲಿ
ಗೋಕರ್ಣ ಎಂದರೆ ಹಣ,ಗೋಕರ್ಣ ಎಂದರೆ ಅರಾಜಕತೆ, ಗೋಕರ್ಣ ಎಂದರೆ ಕೊಳಚೆ, ಗೋಕರ್ಣ ಎಂದರೆ ಕೆಟ್ಟ ವಾಸನೆ, ಗೋಕರ್ಣ ಎಂದರೆ ಮೋಸ ದಗ, ವಂಚನೆ..
ಮಹಾಬಲೇಶ್ವರನ ಗುಡಿಯ ಹೊರಗೆ ಬಂದು ನಿಂತ ಭಕ್ತರ ಮಾತುಗಳು ಹೀಗೆ ನಿರಂತರ ಹರಿಯುತ್ತಿತ್ತು. ಬದಲಾಗಬೇಕಪ್ಪಾ ಈ ಗೋಕರ್ಣ ಎನ್ನುತ್ತಿದ್ದರು ಮಹಾಬಲೇಶ್ವರನ ನಿಜ ಭಕ್ತರು. ಎಲ್ಲದಕ್ಕೂ ಒಂದು ಅಂತ್ಯ ಇರುತ್ತದೆ, ಅದರಲ್ಲೂ ಕೆಟ್ಟದಕ್ಕೆ ಕಡ್ಡಾಯ ನಿವೃತ್ತಿ ಇದ್ದೇ ಇರುತ್ತದೆ. 2008 ಆಗಸ್ಟ್ 14 ಕ್ಕೆ ಗೋಕರ್ಣದ ಸ್ವಾತಂತ್ರ್ಯವನ್ನು ಯಾವಾಗ ಸರಕಾರ ಘೋಷಿಸಿತೋ ರಾಮಚಂದ್ರಾಪುರ ಮಠ ತನ್ನ ಅನಾದಿಕಾಲದ ನಿಧಿಯನ್ನು ತೊಳೆದು ಪಾವನ ಗೊಳಿಸಲು ಸಜ್ಜಾಯಿತು. ಮೊದಲಾಗಿ ಅರಾಜಕತೆ ಮತ್ತು ಅವ್ಯವಸ್ಥೆಯನ್ನು ನಿವಾರಿಸಲು ಶ್ರೀಮಠ ಮುಂದಾಯಿತು.
ಶ್ರೀಮಠ ಗೋಕರ್ಣದಲ್ಲಿ ಸುವ್ಯವಸ್ಥಿತ ಮನಸ್ಸುಗಳನ್ನು ಸೃಷ್ಟಿಸತೊಡಗಿತು.ಕಲುಷಿತ ಮಹಾಬಲೇಶ್ವರನ ಆಲಯವನ್ನು ಕೋಟಿ ರುದ್ರದ ಮೂಲಕ ಪಾವನಗೊಳಿಸಲು ರಾಘವೇಶ್ವರ ಶ್ರೀಗಳು ಕರೆ ನೀಡಿದರು.ದೇವಾಲಯದ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಬರುವ ಭಕ್ತರಿಗೆ ಮಹಾಬಲನ ಸನ್ನಿಧಿಯಲ್ಲಿ ಆಪ್ತ ಭಾವ ಮೂಡುವಂತೆ ಮಾಡಲಾಯಿತು.
ಮತ್ತೆ ಮತ್ತೆ ಎದುರಾಗುತ್ತಿದೆ ವಿಘ್ನ
ಯಾವಾಗ ಗೋಕರ್ಣ ಶುಚಿಯಾಗತೊಡಗಿತೋ ಅಶುಚಿ ಮನಸ್ಸುಗಳು ದಿಕ್ಕೆಟ್ಟವು. ಮಹಾಬಲೇಶ್ವರನಿಗೇ ಸವಾಲು ಹಾಕಲು ಹೂಟಗಳು ರಚನೆಯಾದವು. ಇಷ್ಟು ಕಾಲ ತಿಂದು ತೇಗಿದ ಹೊಟ್ಟೆಗಳಲ್ಲಿ ತಳಮಳ ಥೇಟ್ ಅರಬ್ಬೀ ಸಮುದ್ರದ ಅಲೆಗಳಂತೆ ಉಕ್ಕೇರತೊಡಗಿದವು. ಗೋಕರ್ಣವನ್ನೇ ದುಡ್ಡಿನ ಪೆಟ್ಟಿಗೆ ಮಾಡಿ, ಹಾಸಿ ಉಂಡು ಬೀಡು ಬೀಸಾಗಿ ಸಾಗುತ್ತಿದ್ದವರೆಲ್ಲಾ ಒಂದು ಛತ್ರಿಯಡಿ ಸೇರಿಕೊಂಡರು. ಅದೇ ಗೋಕರ್ಣ ಹಿತರಕ್ಷಣಾ ಸಮಿತಿ ಎಂಬ ಕಾಳಕೂಟ.
ಕಾಳಕೂಟದ ಕರಾಮತ್ತು ಮತ್ತು ಮಹಾಬಲೇಶ್ವರ ಎಂಬ ಸತ್ಯ
ಈ ಕಾಳಕೂಟದ ಕಾರ್ಯವೈಖರಿಗಳು ಹಲವಾರು. ನ್ಯಾಯಾಂಗ ವ್ಯವಸ್ಥೆಯ ಅತ್ಯಂತ ಪವಿತ್ರವಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂಬ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ಈ ಕಾಳಕೂಟ ಅತ್ಯಂತ ದೊಡ್ಡ ಕೈ. ಒಂದಲ್ಲ ಒಂದು ಪಿಐಎಲ್ ಹಾಕಿ ಗೋಕರ್ಣದ ಸುವ್ಯವಸ್ಥೆಗೆ ತಡೆಯೊಡ್ಡುವುದು ಈ ಕೂಟದ "ಹವ್ಯಾಸ"ಗಳಲ್ಲೊಂದು. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ನ್ಯಾಯಾಲಯಗಳಲ್ಲಿ ಪಿ. ಐ. ಎಲ್. ಹಾಕಿ ಶ್ರೀಮಠಕ್ಕೆ ಕಿರುಕುಳ ನೀಡುವುದು ಈ ಕೂಟದ ಚಾಳಿ.
ಜೊತೆಗೆ ಈ ಸುಳ್ಳು ಕಂತೆಗಳನ್ನು ಪದೇ ಪದೇ ಮಾಧ್ಯಮಗಳಲ್ಲಿ ಹರಿಯಬಿಡುವುದು ಮತ್ತು ಆ ಮೂಲಕ ಕಜ್ಜಿ ತುರಿಸಿಕೊಂಡ ಆನಂದವನ್ನು ಅನುಭವಿಸುವುದು ಕೂಟದ ಕಾರಸ್ಥಾನಿಗಳ "ಕೈಂಕರ್ಯ".
ಈ ಕಾಳಕೂಟದ ಕಳ್ಳರು ಶ್ರೀಮಠದ ಶ್ರೀಗಳ ಮೇಲೆಯೂ ಹರಿಹಾಯಲು ಬಂದ ಹಲವಾರು ನಿದರ್ಶನಗಳಿವೆ. ಇವರೆಲ್ಲಾ ಕ್ರಿಮಿನಲ್ ಹಿನ್ನೆಲೆಯುಳ್ಳವರು. ಇವರ ಹಿತರಕ್ಷಣಾ ಸಮಿತಿಯೇ ಶುದ್ಧಾಂಗ ಢೋಂಗಿ. ಇದು ನೋಂದಾಯಿತ ಸಂಸ್ಥೆಯಲ್ಲ. ಇದಕ್ಕೆ ಗೋಕರ್ಣದ ಹಿತ ಬೇಕಾಗಿಲ್ಲ.ಅದಕ್ಕಾಗಿ ಈ ಕೂಟ ಯಾವುದೇ ಕೆಲಸ ಮಾಡಿದ ನಿದರ್ಶನಗಳೂ ಇಲ್ಲ. ಈ ಹಿತರಕ್ಷಣಾ ಸಮಿತಿ ಗೋಕರ್ಣದ ಯಾವುದೇ ಸಮಸ್ಯೆಗಳನ್ನು ಬಗೆಹರಿಸಿಲ್ಲ.ಆದರೆ ಗೋಕರ್ಣದ ಸಮಸ್ಯೆ ನಿವಾರಣೆಗೆ ಢಾಳಾಗಿ ಅಡ್ಡಿಪಡಿಸುತ್ತಿರುವುದನ್ನು ಮಾತ್ರಾ ನಿಲ್ಲಿಸಿಯೂ ಇಲ್ಲ.
ಮುಂದುವರಿಯುವುದು...