ಗೋಕರ್ಣ ದೇವಸ್ಥಾನದ ಪ್ರವೇಶದ್ವಾರ
ಅರೆ ಬೆತ್ತಲೆಯಾಗಿ ಮಾದಕ ದ್ರವ್ಯ ಸೇವಿಸಿಕೊಂಡು ಬಿದ್ದುಕೊಳ್ಳುವುದಕ್ಕೊಂದು ಸಮುದ್ರ ದಂಡೆ ಎಂಬಂತಿತ್ತು ಈ ಗೋಕರ್ಣ. ಇದೀಗ ಇಂತಹ ವಿಲಾಸಿ ತಾಣದ ಪೊರೆ ಕಳಚಿಕೊಂಡು ಮತ್ತೆ ಗತವೈಭವ ಸಾರಲು ಸಜ್ಜಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಗೂಗಲ್ ಸರ್ಚ್ ನಲ್ಲಿ ಮಹಾಬಲೇಶ್ವರ ದೇವಸ್ಥಾನದ ಹೆಸರೂ ಹೆಚ್ಚಾಗಿ ಬಳಕೆಯಲ್ಲಿದೆ !
ಇಂಥದ್ದೊಂದು ಬದಲಾವಣೆ ಹೇಗೆ ಸಾಧ್ಯವಾಯಿತು ಎಂದರೆ, ಗೋಕರ್ಣದ ನಿವಾಸಿಗಳು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಯವರತ್ತ ಬೊಟ್ಟು ಮಾಡುತ್ತಾರೆ. ಅವರೋ ಎಲ್ಲವೂ ದೈವೇಚ್ಛೆ ಎನ್ನುತ್ತಾರೆ.. ಗೋಕರ್ಣಕ್ಕೆ ಹೊಸ ಭಾಷ್ಯ ಬರೆಯಬೇಕು ಎಂಬುದು ಶ್ರೀಗಳ ಮನದ ಸಂಕಲ್ಪ. ಅದರಿಂದಾಗಿಯೇ ಇಂದು ಇಂಥದ್ದೊಂದು ಮಹತ್ವದ ಬದಲಾವಣೆ ಕಾಣಲು ಸಾಧ್ಯವಾಗಿದೆ.
ಗೋಕರ್ಣದ ಕಡಲಿನಲ್ಲಿ ಹೊಸ ಸೂರ್ಯ ಮೂಡುತ್ತಿದ್ದಾನೆ,ಸಂಜೆ ವೇಳೆಗೆ ಕೋಟಿತೀರ್ಥದ ಕೆರೆಯಲ್ಲಿ ಕಾಣುವ ತಿಳಿನೀರಿಲ್ಲಿ ಸಮುದ್ರದಲ್ಲಿ ಕಂತುವ ಸೂರ್ಯನ ಕೆಂಬಣ್ಣದ ಕಿರಣ ಕೋಟಿ ತೀರ್ಥದ ನಿರ್ಮಲ ಸೌಂದರ್ಯಕ್ಕೆ ಒಪ್ಪ ನೀಡುತ್ತಿದೆ.ಹಾಗೇ ಆಗಬೇಕು ಎಂಬುದು ಗೋಕರ್ಣದ ಮೇಲೆ ಪ್ರೀತಿ ಉಳ್ಳ ಎಲ್ಲರ ಆಸೆಯೂ ಆಗಿತ್ತು.ಅದಕ್ಕಾಗಿ ಗೋಕರ್ಣದ ಮಹಾಬಲೇಶ್ವರನ ಸನ್ನಿಧಿಗೆ ಬಂದ ಎಲ್ಲರೂ ಅಪೇಕ್ಷಿಸುತ್ತಲೂ ಇದ್ದರು.ಗೋಕರ್ಣ ಬದಲಾಗಬೇಕು ಎಂಬುದು ಮಹಾಬಲೇಶ್ವರನ ಗುಡಿಯ ಮುಂದೆ ಕೈಮುಗಿದು ನಿಂತ ಭಕ್ತನ ಪ್ರಾರ್ಥನೆಯಲ್ಲಿ ಅಡಕವಾಗಿತ್ತು. ಹಾಗೊಂದು ಪುನರುತ್ಥಾನ ಸದ್ದಿಲ್ಲದೇ ಆರಂಭವಾಗಿದೆ.
ಹಿನ್ನೆಲೆ: ಕರ್ನಾಟಕದ ಕರಾವಳಿಯ ಒಂದು ಸುಂದರ ಊರು ಈ ಗೋಕರ್ಣ ! ಅನಾದಿ ಕಾಲದ ಪಟ್ಟಣ. ರಾಮಾಯಣದ ಹನುಮನ ಹುಟ್ಟೂರು,ರಾವಣನ ಗರ್ವಭಂಗಕ್ಕೆ ಸಾಕ್ಷಿಯಾದ ನೆಲವೂ ಹೌದು..
ಅರಬ್ಬೀ ಸಮುದ್ರದ ಅಲೆಗಳು ಅವಿಚ್ಛಿನ್ನವಾಗಿ ಗೋಕರ್ಣವನ್ನು ತೊಳೆಯುತ್ತಿವೆ.ಸಹಸ್ರಸಹಸ್ರ ವರ್ಷಗಳಿಂದ ಗೋಕರ್ಣದ ಸಮುದ್ರದ ದಂಡೆಗಳಲ್ಲಿ ಪಾಪಕೂಪಗಳು ಕಳೆದುಹೋಗುತ್ತಿವೆ. ಗೋಕರ್ಣ ಇರುವುದೇ ಹಾಗೇ, ಅದೊಂದು ರೀತಿಯ ಪುರಾತನ ನಗರಿ.ಅಲ್ಲಿನ ಬೀದಿಗಳು,ಕೋಟಿತೀರ್ಥ,ಬ್ರಾಹ್ಮಣರ ಮನೆಗಳು ಎಲ್ಲವನ್ನೂ ದಾಟಿ ಬಂದರೆ ಕಾಣುವುದು ಮಹಾಬಲೇಶ್ವರ ದೇವಾಲಯ.ಮುಂಭಾಗದಲ್ಲಿ ಸಮುದ್ರ!
ಐತಿಹ್ಯದ ಕಡೆಗೊಮ್ಮೆ ಕಣ್ಣು ಹಾಯಿಸಿದರೆ, ಶಂಕರಭಗವತ್ಪಾದರ ಕಾಲವದು.ಈಗ್ಗೆ ಸರೀ ಸುಮಾರು 1400 ವರ್ಷಗಳ ಹಿಂದಿನ ಮಾತು.ಲೋಕ ಶಂಕರ ಸಂಚಾರಿ ಶಂಕರರು ಗೋಕರ್ಣಕ್ಕೂ ಬಂದರು.ಜೊತೆಗೆ ಶಿಷ್ಯ ಪ್ರಶಿಷ್ಯರು. ಮಹಾಬಲೇಶ್ವರನನ್ನು ಕಂಡರು.ಆತ್ಮಲಿಂಗವನ್ನು ಪೂಜಿಸಿದರು.ನಂತರ ಪಕ್ಕದ ಅಶೋಕೆ ಎಂಬ ಸ್ಥಳಕ್ಕೆ ಹೋದರು.ಅಲ್ಲಿ ಧರ್ಮಾಚಾರ್ಯ ಪೀಠವೊಂದನ್ನು ಸಂಸ್ಥಾಪಿಸಿದರು. ತಮ್ಮ ಪ್ರಶಿಷ್ಯನಾಗಿದ್ದ ಶಿಷ್ಯ ಸುರೇಶ್ವರಾಚಾರ್ಯರ ಮೊದಲ ಶಿಷ್ಯರೂ ಆಗಿದ್ದ ಶ್ರೀವಿದ್ಯಾನಂದಾಚಾರ್ಯರನ್ನು ಧರ್ಮಾಚಾರ್ಯ ಪೀಠಕ್ಕೆ ಅಧಿಪತಿಯನ್ನಾಗಿ ಕುಳ್ಳಿರಿಸಿದರು.ಈ ವೇಳೆಗೆ ಅಲ್ಲಿ ಅಗಸ್ತ್ಯ ಋಷಿ ಪೂಜಿಸುತ್ತಿದ್ದ ವರದಮುನಿಗಳು ಶಂಕರರಿಗೆ ನೀಡಿದ ತಪೋರಾಮಾದಿವಿಗ್ರಹಗಳನ್ನೂ, ಚಂದ್ರಮೌಳೀಶ್ವರಲಿಂಗ ಹಾಗೂ ಪಾದುಕೆಗಳನ್ನು ನೀಡಿ ಮಹಾಬಲನನ್ನೂ ಪೂಜಿಸುತ್ತಾ ಧರ್ಮಪ್ರವರ್ತಕನಾಗಿ ಗೋಕರ್ಣಮಂಡಲಾಧೀಶ್ವರನಾಗಿ ಬೆಳಗು ಎಂದು ಹರಸಿದರು. ಆಚಾರ್ಯ ಶಂಕರರೇ ಆ ಧರ್ಮಪೀಠಕ್ಕೆ ಶ್ರೀರಾಮಚಂದ್ರನ ನೆನಪಿನಲ್ಲಿ ರಘೂತ್ತಮ ಮಠ ಎಂದು ಹೆಸರಿಟ್ಟರು.ಇಲ್ಲಿಂದ ಶುರುವಿಟ್ಟುಕೊಂಡಿತು ಆ ಪೀಠ ಪರಂಪರೆ.
(ಮುಂದುವರಿಯುವುದು..)