ಅಡಿಕೆ ನಿಷೇಧದಂತಹ ಸುದ್ದಿಯಿಂದ ಕಂಗಾಲಾದ ಅಡಿಕೆ ಬೆಳೆಗಾರರ ಮೊಗದಲ್ಲಿ ಈಗ ಸಂತಸ ಮೂಡಿದೆ. ಕಾರಣ ಅಡಿಕೆ ದರ ಏರಿಕೆಯಾಗಿದೆ. ಇತ್ತೀಚೆಗಷ್ಟೇ ಕೊಬ್ಬರಿ ಹಾಗೂ ಕಾಳುಮೆಣಿಸಿನ ದರ ಏರಿಕೆಯಾಗಿತ್ತು. ಇದರ ಬೆನ್ನಲ್ಲೇ ಅಡಿಕೆ ದರ ಕೂಡ ಹೆಚ್ಚಳವಾಗಿರುವುದು ರೈತರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.
ರಾಶಿ ಇಡಿ, ಬೆಟ್ಟೆಗೆ ಕ್ವಿಂಟಾಲ್ ಗೆ 15-20 ಸಾವಿರ ರೂ ಇದ್ದ ಅಡಿಕೆ ದರ ಈಗ 29 ಸಾವಿರ ರೂ ತಲುಪಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಇಡಿ ಅಡಿಕೆ ಕ್ವಿಂಟಾಲ್ ಗೆ ಈವರೆಗೆ ಅತಿ ಹೆಚ್ಚೆಂದರೆ 15-19 ಸಾವಿರ ರೂ. ಬೆಲೆ ಬಂದಿತ್ತು. ಆದರೆ ಈ ವರ್ಷ ಗರಿಷ್ಠ 29 ಸಾವಿರ ರೂ. ದಾಖಲಾದರೆ, ಬೆಟ್ಟೆ ಅಡಿಕೆ ಬೆಲೆ 18-22 ಸಾವಿರ ರೂಗೆ ಮಾರಾಟವಾಗಿತ್ತು. ಈಬಾರಿ ಬೆಟ್ಟೆ ಅಡಿಕೆ ಬೆಲೆ ಕೂಡ 29 ಸಾವಿರ ರೂಗೆ ಏರಿಕೆಯಾಗಿದೆ.
ಅಲ್ಲದೇ ಸರಕು ಕ್ವಿಂಟಾಲ್ ಗೆ 25 ಸಾವಿರ ರೂ. ತಲುಪಿದರೆ, ಗೊರಬಲು ಅಡಿಕೆಗೆ ಕ್ವಿಂಟಾಲ್ ಗೆ 19-20 ಸಾವಿರ ರೂ ಆಗಿರುವುದು ಅಚ್ಚರಿಗೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ನಿಧಾನವಾಗಿ ಏರಿಕೆಯಾಗುತ್ತಿದ್ದ ಅಡಿಕೆ ಧಾರಣೆ ಕಳೆದ 15 ದಿನದಲ್ಲಿ ತೀವ್ರಗತಿಯಲ್ಲಿ ಸಾಗಿತು.
ಅಡಿಕೆ ಆಮದು ಆಮದು ಧಾರಣೆಯನ್ನು ಕನಿಷ್ಟ 11 ಸಾವಿರ ರೂ.ಗೆ ನಿಗದಿ ಮಾಡಿದ್ದಲ್ಲದೇ ತೆರಿಗೆಯನ್ನು ಶೇ.100ರಷ್ಟು ಹೇರಿದ್ದು ಅಡಿಕೆ ಧಾರಣೆ ಏರಿಕೆಗೆ ಪ್ರಮುಖ ಕಾರಣ. ಗುಟ್ಕಾ ನಿಷೇಧದ ಬಳಿಕ ಪ್ರತ್ಯೇಕ ಎರಡು ಸ್ಯಾಚೆಗಳಲ್ಲಿ ತಂಬಾಕು ಮತ್ತು ಅಡಿಕೆ ಪುಡಿ ಮಾರುಕಟ್ಟೆಗೆ ಬರುತ್ತಿದ್ದು, ಇದಕ್ಕೆ ಗುಣಮಟ್ಟದ ಅಡಿಕೆ ಮಾತ್ರ ಬಳಕೆಯಾಗುತ್ತದೆ. ಇದು ಕೂಡ ಅಡಿಕೆ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಕೆಲವರ ಅಭಿಪ್ರಾಯ.
ಅದೇನೇ ಇರಲಿ, ಗುಟ್ಕಾ ನಿಷೇಧದ ಬಳಿಕ ಅಡಿಕೆ ಮೇಲೆ ಬೀರಿದ ಪರಿಣಾಮದಿಂದ ಕಂಗಾಲಾದ ರೈತರು, ಅಡಿಕೆ ಬೆಲೆಯಲ್ಲಿ ಸ್ಥಿರತೆ ಕಾಣುತ್ತಿರುವುದು ಅಡಿಕೆ ಬೆಳೆಗಾರರಲ್ಲಿ ನೆಮ್ಮದಿ ಮೂಡಿಸಿದೆ.