ಊರ ಕಣ ಕಾದು ದಾಸಯ್ಯ ಕೆಟ್ಟ ಇದು ಗಾದೆ ಮಾತು. ಇಲ್ಲಿ ಗಾದೆಯ ಭಾವಾರ್ಥಕ್ಕಿಂತ ಈ ಹಿಂದೆ ಹಳ್ಳಿಗಳಲ್ಲಿ ಕೃಷಿಕರಿಗೆ ಅನುಕೂಲವಾಗಲೆಂದು ಊರಿಗೊಂದು ಒಕ್ಕಣೆಯ ಕಣ ಇರುತ್ತಿತ್ತು ಎಂಬುದನ್ನು ಕಾಣಬಹುದು. ಗ್ರಾಮೀಣ ಭಾರತದಲ್ಲಿ ಇರುವ ಸಣ್ಣ ಪುಟ್ಟ ರೈತರು ಹೊಂದಿರುವ ಸಣ್ಣ ಜಮೀನುಗಳಲ್ಲಿ ಬೆಳೆ ಬೆಳೆಯುವುದು ತ್ರಾಸದಾಯಕವಾದ ಪರಿಸ್ಥಿತಿ ಇರುವಾಗ ಒಕ್ಕಣೆ ಕಣಕ್ಕೆ ಸ್ಥಳವೆಲ್ಲಿ? ಬೆಳೆದ ಬೆಳೆಯಿಂದ ಕಾಳು ಬೇರ್ಪಡಿಸಲು ಅಗತ್ಯವಾದ ಕಣಕ್ಕೆ ಪರದಾಡುವ, ರಸ್ತೆಗಳಲ್ಲಿ ಒಕ್ಕಣೆ ಮಾಡುವ ಕಾರ್ಯ ನಡೆದಿತ್ತು. ಇದನ್ನು ಗಮನಿಸಿದ ರಾಜ್ಯ ಸರ್ಕಾರವು ಊರಿಗೊಂದು ಒಕ್ಕಣೆ ಕಣ ನಿರ್ಮಿಸಲು ನಿರ್ಧರಿಸಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಗೆ ಲಭ್ಯವಿರುವ ಸರ್ಕಾರದ ಜಾಗವನ್ನು ಬಳಸಿಕೊಂಡು ರೈತರಿಗೆ ಅನುಕೂಲವಾಗುವಂತೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ 15೦ ರಿಂದ 2೦೦ ಅಡಿ ವ್ಯಾಸವುಳ್ಳ ಒಕ್ಕಣೆ ಕಣವನ್ನು ನಿರ್ಮಿಸಲು ಸರ್ಕಾರ ಆದೇಶ ಹೊರಡಿಸಿದೆ. ಒಕ್ಕಣೆ ಕಣದ ಕಾಮಗಾರಿಯನ್ನು ಲಭ್ಯವಿರುವ ಸರ್ಕಾರದ ಜಾಗದಲ್ಲಿ ನಿರ್ಮಿಸಲು ಸರ್ಕಾರವು ಕೆಲವೊಂದು ಷರತ್ತುಗಳನ್ನು ವಿಧಿಸಿದೆ.
ಒಕ್ಕಣೆ ಕಣದ ಕಾಮಗಾರಿಯನ್ನು ನಿರ್ಮಿಸುವಾಗ ಕೂಲಿ ಮತ್ತು ಸಾಮಗ್ರಿಗಳ ವೆಚ್ಚವನ್ನು 6೦:4೦ ರ ಅನುಪಾತವನ್ನು ಕಡ್ಡಾಯವಾಗಿ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ಪಾಲನೆ ಮಾಡುವುದು. ಕೇಂದ್ರ ಸರ್ಕಾರವು ಹೊರಡಿಸಿರುವ ಕಾರ್ಯಾಚರಣೆಯ ಮಾರ್ಗಸೂಚಿಗಳು 2೦13 ನಾಲ್ಕನೇ ಆವೃತ್ತಿಯನ್ನು ಕಡ್ಡಾಯವಾಗಿ ಪಾಲನೆ ಮಾಡುವುದು. ಈ ಯೋಜನೆಯ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಗ್ರಾಮ ಸಭೆಯ ಅನುಮೋದನೆ ನಂತರ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಂಡು ಅನುಷ್ಠಾನಗೊಳಿಸುವುದು. ಕಾಮಗಾರಿಯ ಅನುಷ್ಠಾನವನ್ನು ಸಾಕಷ್ಟು ಕೂಲಿ ಬೇಡಿಕೆ ಅಥವಾ ಕಾರ್ಮಿಕರ ಬೇಡಿಕೆಯಿರುವುದನ್ನು ಖಚಿತಪಡಿಸಿಕೊಂಡು ಅನುಷ್ಠಾನಗೊಳಿಸುವುದು.
ಕಾಮಗಾರಿಯ ಅಕುಶಲ ಕೆಲಸವನ್ನು ಕೇವಲ ನೋಂದಾಯಿತ (ಉದ್ಯೋಗ ಚೀಟಿ ಹೊಂದಿದ) ಕಾರ್ಮಿಕರಿಂದ ನಿರ್ವಹಿಸಬೇಕು. ಗುತ್ತಿಗೆದಾರರನ್ನು ಮತ್ತು ಯಂತ್ರಗಳನ್ನು ಅನುಷ್ಠಾನದಲ್ಲಿ ಬಳಸಲು ನಿಷೇಧಿಸಿದೆ. ಕಾಮಗಾರಿಯ ನಿರ್ಮಾಣದ ಮೊತ್ತವು ಅಂದಾಜು ಪಟ್ಟಿಯ ಮೊತ್ತಕ್ಕೆ ಮೀರದಂತೆ ಕ್ರಮವಹಿಸಬೇಕು. ಒಂದು ವೇಳೆ ಕಾಮಗಾರಿಗೆ ಆದ ಖರ್ಚು ಅಂದಾಜು ವೆಚ್ಚಕ್ಕಿಂತ ಕಡಿಮೆ ಆದರೆ ಅದನ್ನು ಸೀಮಿತಗೊಳಿಸಬೇಕು. ಸ್ವೀಕರಿಸಲಾದ ಮಾದರಿ ಅಂದಾಜು ಪಟ್ಟಿ ಮತ್ತು ನಕ್ಷೆಯು ಸ್ಥಳೀಯ ಪರಿಸ್ಥಿತಿಗೆ ಯೋಗ್ಯವಾಗದೇ ಇದ್ದಲ್ಲಿ ಅಗತ್ಯವೆನ್ನಿಸಬಹುದಾದ ಅಳತೆಗಳನ್ನು ಬದಲಾವಣೆ ಮಾಡಬೇಕು ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.
ಹೀಗೆ ಗ್ರಾಮೀಣ ಸಣ್ಣ ರೈತರ ಕೃಷಿ ಬದುಕಿಗೆ ರಾಜ್ಯ ಸರ್ಕಾರ ಸ್ಪಂದಿಸುವ ಮೂಲಕ ರೈತರ ಏಳಿಗೆಯೆತ್ತ ಹೆಜ್ಜೆ ಇಟ್ಟಿದೆ ಎಂದರೆ ತಪ್ಪಾಗಲಾರದು.