ನವರಾತ್ರಿ.... ಹಿಂದೂಗಳಿಗೆ ಮುಖ್ಯ ಹಬ್ಬ. ಆಶ್ವಯುಜ ಮಾಸದ ಶುಕ್ಲ ಪಕ್ಷದಲ್ಲಿ ಪಾಡ್ಯದಿಂದ ದಶಮಿವರಗೆ ನವದುರ್ಗೆಯರನ್ನು ಪೂಜಿಸುವುದು ಹಬ್ಬದ ವೈಶಿಷ್ಟ್ಯ. 2013ರ ನವರಾತ್ರಿ ಆಚರಣೆ ಆರಂಭವಾಗಿದ್ದು, ಅಕ್ಟೋಬರ್ 5ರಿಂದ ನವರಾತ್ರಿಯನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿಶೇಷವಾಗಿ ಆಚರಿಸಲಾಗುತ್ತದೆ.
ಇದನ್ನು ಶರದ್ ಋತುವಿನಲ್ಲಿ ಆಚರಿಸುವುದರಿಂದ ಶರನ್ನವರಾತ್ರಿ ಎಂದು ಕರೆಯುತ್ತಾರೆ. ಶರನ್ನವರಾತ್ರಿಯ 9ದಿನಗಳೂ ವೈವಿಧ್ಯದಿಂದ ಕೂಡಿದ್ದು ಪ್ರತಿ ದಿನವೂ ಶಕ್ತಿಯ ಆರಾಧನೆಯನ್ನು ನಡೆಸಲಾಗುತ್ತದೆ. ಈ ಹಬ್ಬದಲ್ಲಿ ಸಾಂಸ್ಕೃತಿಕ ವೈಭವಗಳೂ ಮೇಳೈಸಿದ್ದು ಕರ್ನಾಟಕದ ಮಟ್ಟಿಗೆ ಹೊಸದೊಂದು ಲೋಕವೇ ಅನಾವರಣಗೊಳ್ಳುತ್ತದೆ ಅದೇ ದಸರಾ ಉತ್ಸವ.
ಸಾಂಸ್ಕೃತಿಕ ನಗರಿಯೆಂದೇ ಜಗದ್ವಿಖ್ಯಾತಿ ಪಡೆದಿರುವ ಮೈಸೂರಿನಲ್ಲಿ ರಾಜವಂಶಸ್ಥರು ನಡೆಸುವ ಪೂಜಾಕೈಂಕರ್ಯಗಳು, ದರ್ಬಾರ್, ರಾಜಾಳ್ವಿಕೆಯ ಗತ ವೈಭವವನ್ನು ನೆನಪಿಸುತ್ತದೆ. ದೇಶವಿದೇಶಗಳಿಂದ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ವಿಜಯನಗರ, ಮೈಸೂರು ಅರಸರು ಜೈತ್ರಯಾತ್ರೆಯಲ್ಲಿ ಗೆಲುವು ಪಡೆದು ಸಂಭ್ರಮದಿಂದ ನವರಾತ್ರಿಯನ್ನು ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ ಎಂದೂ ಹೇಳಬಹುದು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿಯ ಪೂಜೆಯಿಂದ ನವರಾತ್ರಿ ಪ್ರಾರಂಭವಾಗುತ್ತದೆ. ವಿಜಯದಶಮಿ ದಿನ ಚಾಮುಂಡಿ ದೇವಿಯನ್ನು ಚಿನ್ನದ ಅಂಬಾರಿಯಲ್ಲಿ ಕೂರಿಸಿ ಆನೆಯ ಮೇಲೆ ಜಂಬೂ ಸವರಿ ಮಾಡುತ್ತಾರೆ. ಬನ್ನಿ ಮಂಟಪದಲ್ಲಿ ಬನ್ನಿ ಮರಕ್ಕೆ ಪೂಜೆ ಮಾಡುವ ಮೂಲಕ ನವರಾತ್ರಿಯ ವೈಭವ ಕೊನೆಗೊಳ್ಳುತ್ತದೆ. ಈ ಹತ್ತು ದಿನ ಅರಮನೆಗೆ ದೀಪದಿಂದ ಅಲಂಕಾರ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಂಗೊಳಿಸುವುದು ವಿಶೇಷ.
ನವರಾತ್ರಿ ಸಂದರ್ಭದಲ್ಲಿ ರಾಜವಂಶಸ್ಥರ ದರ್ಬಾರ್
ನವರಾತ್ರಿಯ ಆಚರಣೆ ಪ್ರಮುಖ ಗಟ್ಟವಾಗಿರುವ ವಿಜಯದಶಮಿ ಆಚರಣೆಗೆ ಪುರಾಣಪ್ರಸಿದ್ಧ ಮಹಾಭಾರತದ ಅನೇಕ ಘಟನೆಗಳೂ ತಳುಕು ಹಾಕಿಕೊಂಡಿದ್ದು ದೇವಾನು ದೇವತೆಗಳು ನವರಾತ್ರಿ ಆಚರಣೆ ಮಾಡಿರುವ ಉಲ್ಲೇಖವಿದೆ.
ದ್ವಾಪರ ಯುಗದಲ್ಲಿ ಅಜ್ನಾತವಾಸದಲ್ಲಿದ್ದ ಪಾಂಡವರು ಶಮೀವೃಕ್ಷದಲ್ಲಿ ಕಟ್ಟಿಟ್ಟ ಆಯುಧಗಳನ್ನು ಪುನಃ ಪಡೆದು ಕೌರವರನ್ನು ಸೋಲಿಸಿದ ದಿನವೂ ಹೌದು ಹಾಗಾಗಿ ಪಾಂಡವರಿಗೆ ವಿಜಯ ತಂದುಕೊಟ್ಟ ಶಮೀ ವೃಕ್ಷಕ್ಕೆ ವಿಜಯದ ಸಂಕೇತವಾಗಿ ಪೂಜೆ ಮಾಡುವ ದಿನವೇ ವಿಜಯದಶಮಿ("ವಿಜಯದ ಶಮೀ"-ವಿಜಯದಶಮಿ)ಯಾಗಿದೆ ಎಂಬ ಕಥೆ ಇದೆ. ವಿಜಯದಶಮಿಯಂದು ಆರಂಭಿಸಿದ ಸತ್ಕಾರ್ಯ ಗಳೆಲ್ಲ ಜಯಪ್ರದವಾಗುತ್ತವೆ.
ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ಕೊಂದನು ಎಂದು ಇತಿಹಾಸ ಹೇಳುತ್ತದೆ.
ದುಷ್ಟ ಸಂಹಾರಕ್ಕಾಗಿ ಒಂದೊಂದು ಅವತಾರವೆತ್ತಿದ ಜಗನ್ಮಾತೆ,ಧರ್ಮಕ್ಕೆ ಮಾರಕವಾಗಿದ್ದ ರಾಕ್ಷಸರನ್ನು ಸಂಹರಿಸಿ ಲೋಕವನ್ನು ಕಾಪಾಡುತ್ತಾಳೆ ಈ ಹಿನ್ನೆಲೆಯಲ್ಲಿ ನವರಾತ್ರಿ ಮತ್ತಷ್ಟು ವೈಶಿಷ್ಟ್ಯ ಹೊಂದಿದ್ದು, ನವರಾತ್ರಿಯ ಒಂದೊಂದು ದಿನವೂ ವಿಶೇಷವಾಗಿ ಆದಿ ಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತದೆ. ಆ. ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ವಿಜಯಸಾಧಿಸಿದ ದಿನವೂ ದಶಮಿಯಾಗಿದೆ. ಹೀಗೆ ಇತಿಹಾಸದಿಂದ ನವರಾತ್ರಿ ಹಾಗೂ ವಿಜಯದಶಮಿ ಮಹತ್ವಪಡೆದುಕೊಂಡಿದೆ. ಆದ್ದರಿಂದಲೇ ಯಾವ ಕಾರ್ಯಕ್ಕೂ ವಿಜಯದಶಮಿಯಂದು ಸಕ್ತಾರ್ಯಗಳನ್ನು ನಡೆಸಲು ಪ್ರಶಸ್ತ ದಿನ!
ನವರಾತ್ರಿಯಲ್ಲಿ ದೇವಿತತ್ತ್ವವು ಎಂದಿಗಿಂತ ಹೆಚ್ಚು ಕಾರ್ಯನಿರತವಾಗಿರುತ್ತದೆ. ಲಲಿತಾಪೂಜೆ, ಸರಸ್ವತಿಪೂಜೆ,ಶಸ್ತ್ರಾಸ್ತ್ರಗಳ ಪೂಜೆ ಸೇರಿದಂತೆ ವಿವಿಧ ರೀತಿಯಲ್ಲಿ ನವರಾತ್ರಿ ಆಚರಿಸಲ್ಪಡುತ್ತದೆ.
ನವರಾತ್ರಿ ವೈಭವ
ಪಾಡ್ಯದಂದು ಯೋಗ ನಿದ್ರಾ ದುರ್ಗಾಪೂಜೆಯನ್ನು,ಬಿದಿಗೆ ದಿನದಂದು ದೇವಜಾತ ದುರ್ಗಾಪೂಜಾ, ತದಿಗೆಯ ದಿನ ಮಹಿಷಾಸುರ ಮರ್ಧಿನಿ ದುರ್ಗಾಪೂಜಾ, ಶೈಲ ಜಾತಾ ದುರ್ಗಾಪೂಜಾ ಚತುರ್ದಶಿಯಶಿಯಂದು, ಪಂಚಮಿಯಂದು ದೂಮೃಹಾ ದುರ್ಗಾಪೂಜಾ, ಚಂಡ-ಮುಂಡ ಹಾ ದುರ್ಗಾಪೂಜಾ ಷಷ್ಠಿಯಂದು, ಸಪ್ತಮಿ,ಅಷ್ಟಮಿ(ದುರ್ಗಾಷ್ಠಮಿ) ಮಹಾನವಮಿ(ಆಯುಧ ಪೂಜೆ) ಯಂದು ಅನುಕ್ರಮವಾಗಿ ರಕ್ತ ಬೀಜ ಹಾ ದುರ್ಗಾಪೂಜಾ,ನಿಶುಂಭ ಹಾ ದುರ್ಗಾಪೂಜಾ,ಶುಂಭ ಹಾ ದುರ್ಗಾಪೂಜೆಯನ್ನು ಆಚರಿಸಲಾಗುತ್ತದೆ.
ಹೀಗೆ ದೇಶಾದ್ಯಂತ ವಿವಿಧ ರೀತಿಯಲ್ಲಿ ನವರಾತ್ರಿ ಆಚರಣೆ ಸಾಂಸ್ಕೃತಿಕ, ಪಾರಂಪರಿಕ ವೈಭವದಿಂದ ಕೂಡಿರುತ್ತದೆ.
Author : Bangalore Waves