ಜುರಾಲಾ ಜಲವಿದ್ಯುತ್ ಆಂಧ್ರದ ಪಾಲು:ಕಣ್ಮುಚ್ಚಿ ಕುಳಿತಿದೆಯೇ ಸರ್ಕಾರ
ಕರ್ನಾಟಕ ಮತ್ತು ಆಂಧ್ರ ಸರ್ಕಾರಗಳ ಜಂಟಿ ಸಹಭಾಗಿತ್ವದ ಇಂದಿರಾ ಪ್ರಿಯದರ್ಶಿನಿ ಜಲ ವಿದ್ಯುತ್ ಯೋಜನೆಯನ್ನು ಆಂದ್ರ ಪ್ರದೇಶ ಹೈಜಾಕ್ ಮಾಡಿದೆ. ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕದ ಪಾಲಿನ ವಿದ್ಯುತ್ ನೀಡದೇ ಆಂದ್ರ ಪ್ರದೇಶ ಸಂಪೂರ್ಣವಾಗಿ ತಾನೇ ಕಬಳಿಸುತ್ತಿದೆ. ಕರ್ನಾಟಕ ಸರಕಾರ ನಿರ್ಲಕ್ಷದ ಪರಿಣಾಮ ರಾಜ್ಯಕ್ಕೆ ಘೋರ ಅನ್ಯಾಯವಾಗುತ್ತಿದೆ. ಆದರೂ ಕರ್ನಾಟಕ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಕಣ್ಣುಮುಚ್ಚಿ ಕುಳಿತಿರುವುದು ಮಾತ್ರ ವಿಪರ್ಯಾಸ.
ಆಂಧ್ರ ಪ್ರದೇಶದ ಜುರಾಲ ಬಳಿ ನಿರ್ಮಿಸಿರುವ ಇಂದಿರಾ ಪ್ರಿಯದರ್ಶಿನಿ ಜಲಾಶಯದಲ್ಲಿ ನಿತ್ಯವೂ ತಲಾ 39 ಮೆಗಾವ್ಯಾಟ್ ಸಾಮರ್ಥ್ಯದ 6 ಘಟಕಗಳ ಮೂಲಕ 234 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ರಾಜ್ಯದ ನದಿ ತೀರದ 5 ಹಳ್ಳಿಗಳು, ಪುಣ್ಯ ಕ್ಷೇತ್ರ ನಾರದಗಡ್ಡೆ ಸೇರಿದಂತೆ ಸಹಸ್ರಾರು ಎಕರೆ ಫಲವತ್ತಾದ ಭೂಮಿ ಮುಳುಗಡೆಯಾಯಿತು.
ಆ ವೇಳೆ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳ ನಡುವೆ ಮಾಡಿಕೊಂಡ ಒಪ್ಪಂದದ ಪ್ರಕಾರ ಇಲ್ಲಿ ಉತ್ಪಾದನೆಯಾಗುವ ಜಲ ವಿದ್ಯುತ್ನಲ್ಲಿ ಎರಡು ರಾಜ್ಯಗಳೂ ಸಮಪಾಲು ಪಡೆಯಲು ಕರಾರು ಮಾಡಲಾಯಿತು. ಅದರಂತೆ ರಾಜ್ಯಕ್ಕೆ ಪ್ರತಿದಿನ 117 ಮೆಗಾವ್ಯಾಟ್ ಅಂದರೆ ರಾಯಚೂರು ಜಿಲ್ಲೆಯೊಂದಕ್ಕೆ ದಿನವೊಂದಕ್ಕೆ ಬೇಕಾಗುವಷ್ಟು ಸರಾಸರಿ ವಿದ್ಯುತ್ ಆಂದ್ರ ಪ್ರದೇಶ ನೀಡಬೇಕಾಗಿತ್ತು. ಆದರೆ ಯೋಜನೆ ಪೂರ್ಣಗೊಂಡು ನಾಲ್ಕು ವರ್ಷ ಕಳೆದಿವೆ, ಈವರೆಗೆ ಆಂಧ್ರ ಪ್ರದೇಶ ಒಂದಿಲ್ಲೊಂದು ಕುಂಟು ನೆಪವೊಡ್ಡಿ ಈ ವರೆಗೆ ರಾಜ್ಯಕ್ಕೆ ವಿದ್ಯುತ್ ನೀಡದೇ ಸಂಪೂರ್ಣ ತಾನೇ ಬಳೆಸಿಕೊಳ್ಳುತ್ತಿದೆ.
ಯೋಜನೆ ಆರಂಭವಾದಾಗ ವಿದ್ಯುತ್ ಸಾಗಾಣಿಕೆ ಲೈನ್ ಇಲ್ಲ ಆದ್ದರಿಂದ ವಿದುತ್ ನೀಡಲಾಗುತ್ತಿಲ್ಲ ಎಂಬ ನೆಪವೊಡ್ಡಿತು. ಆಗ ರಾಜ್ಯ ಸರಕಾರ ಜುರಾಲಾದಿಂದ ರಾಯಚೂರಿನವರೆಗೆ 58 ಕಿಲೋಮೀಟರ್ ಉದ್ದ 22೦ ಕೆವಿ.ಡಬಲ್ ಸರ್ಕ್ಯೂಟ್ ಲೈನ್ ನಿರ್ಮಾಣ ಹಾಗೂ ಸಬ್ ಸ್ಟೇಷನ್ ಅನ್ನು ಕೆಪಿಸಿಎಲ್ ಮೂಲಕ ಒಟ್ಟು 64 ಕೋಟಿ ಹಣ ಖರ್ಚುಮಾಡಿ ಮಾರ್ಗ ನಿರ್ಮಿಸಿ ಒಂದು ವರ್ಷವಾಗುತ್ತಾ ಬಂತು. ಆದರೆ ಈ ವರೆಗೆ ವಿಳಂಬ ಧೋರಣೆ ತೋರಿದ ಆಂದ್ರ ಪ್ರದೇಶ ಈಗ ಹೊಸದೊಂದು ತಗಾದೆ ತಗೆದಿದೆ. ನೀವು ವಿದ್ಯುತ್ ಖರೀದಿಯ ಪಿಪಿಎ ಒಪ್ಪಂದ ಮಾಡಿಕೊಂಡಿಲ್ಲ ಎಂದು ಕೆಪಿಸಿಗೆ ಪತ್ರಬರೆದಿದೆ.
ರಾಜ್ಯ ಸರಕಾರದ ಅಧಿಕಾರಿಗಳು ಹೇಗಾದರೂ ರಾಜ್ಯದ ಪಾಲಿನ ವಿದ್ಯುತ್ ಪಡೆಯಬೇಕೆಂದು ಪಟ್ಟು ಹಿಡಿದು ಬೆನ್ನತ್ತಿದರೂ ರಾಜ್ಯದ ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಆಂಧ್ರ ಪ್ರದೇಶ ಕುತಂತ್ರದ ತಿರುಮಂತ್ರ ಹಾಕುತ್ತಾ ರಾಜ್ಯದ ಪಾಲನ್ನು ತಾನೋಂದೆ ಕಬಳಿಸುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.
Author : ಲೇಖಾ ಆರ್
Share :
More Articles From Agriculture & Environment