ಭತ್ತದ ಬೆಳೆಗೆ ಎಳೆಸುರಳಿ ಹುಳು ಹಾಗೂ ಬೆಂಕಿರೋಗ ಹತೋಟಿಗೆ ಸಲಹೆ
ಶಿವಮೊಗ್ಗ ಜಿಲ್ಲೆಯ ಆಯ್ದ ತಾಲೂಕುಗಳಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಕೂರಿಗೆ ಹಾಗೂ ನಾಟಿ ಮಾಡಿದ ಭತ್ತದ ಬೆಳೆಯಲ್ಲಿ ಎಲೆಸುರಳಿ ಹುಳು ಮತ್ತು ಬೆಂಕಿರೋಗದ ಬಾಧೆ ಕಂಡುಬಂದಿದ್ದು, ಕೀಟ ಮತ್ತು ರೋಗದ ಬಾಧೆ ನಿರ್ವಹಣೆಗೆ ಸಲಹೆ ನೀಡಿದ್ದು, ರೈತರು ಅನುಸರಿಸುವಂತೆ ಜಂಟಿ ಕೃಷಿ ನಿರ್ದೇಶಕ ಕೆ.ಮಧುಸೂದನ್ ಅವರು ತಿಳಿಸಿದ್ದಾರೆ.
ಎಲೆಸುರುಳಿ ಹುಳು: ಭತ್ತದ ಗರಿಯ ಅಂಚುಗಳನ್ನು ಸೇರಿಸಿ ಉದ್ದಕ್ಕೆ ಒಳಗೆ ಸುತ್ತಿ ಜೀವಿಸುವ ಎಲೆಸುರಳಿ ಹುಳುವು ಎಲೆಗಳನ್ನು ತಿಂದು ಜೀವಿಸುತ್ತದೆ. ಈ ಹುಳುವು ಗರಿಯ ಹರಿತ್ತನ್ನು ತಿನ್ನುವುದರಿಂದ ಗರಿಯ ಮೇಲೆ ಬಿಳಿ ಮಚ್ಚೆಗಳು ಗೋಚರಿಸುತ್ತವೆ.
ಈ ರೋಗದ ಹತೋಟಿಗಾಗಿ ಬದು ಹಾಗೂ ಗದ್ದೆಗಳಲ್ಲಿರುವ ಕಳೆ ಅಥವಾ ಆಶ್ರಯ ಸಸ್ಯಗಳನ್ನು ಇಲ್ಲದಂತೆ ನೋಡಿಕೊಳ್ಳಬೇಕು. ರಾಸಾಯನಿಕ ಕ್ರಮವಾಗಿ ಕ್ಲೋರೋಫೈರಿಫಾಸ್ 2ಮಿ.ಲೀ. ಅಥವಾ ಮಾನೋಕ್ರೋಟೊಫಾಸ್ 1.5ಮಿ.ಲೀ. ಅಥವಾ ಕ್ವಿನಾಲ್ಫಾಸ್ 2ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಒಂದು ಎಕರೆಗೆ 2೦೦ಲೀ. ಸಿಂಪರಣಾ ದ್ರಾವಣ ಬೇಕಾಗುವುದು.
ಬೆಂಕಿರೋಗ: ಎಲೆ ಮೇಲೆ ಕಂದು ಬಣ್ಣದ ಶಂಖಾಕೃತಿ ಅಥವಾ ವಜ್ರಾಕೃತಿ ಆಕಾರದ ಚುಕ್ಕೆಗಳು ಕಂಡುಬರುತ್ತವೆ. ರಾತ್ರಿ ವೇಳೆಯಲ್ಲಿ ಕಡಿಮೆ ಉಷ್ಣಾಂಶ ಹಾಗೂ ಹೆಚ್ಚಿನ ತೇವಾಂಶದಿಂದ ರೋಗದ ತೀವ್ರತೆ ಹೆಚ್ಚಾಗಿ ಎಲೆಗಳ ಮೇಲೆ ಉಂಟಾದ ಕಂದು ಚುಕ್ಕೆಗಳು ಒಂದಕ್ಕೊಂದು ಸೇರಿ ಸಂಪೂರ್ಣ ಎಲೆ ಒಣಗಿ ಸುಟ್ಟಂತೆ ಕಾಣುತ್ತದೆ. ತೆಂಡೆ ಬರುವ ಹಂತದಲ್ಲಿ ಗಣ್ಣು ಬಾದೆಗೊಳಗಾದರೆ ಗಣ್ಣಿನ ಮೇಲಿನ ಬುಡದ ಭಾಗ ಸಾಯುತ್ತದೆ ಅಲ್ಲದೇ ತೆನೆ ಪೂರ್ತಿ ಮುರಿದು ಬೀಳುತ್ತದೆ.
ಈ ರೋಗದ ಹತೋಟಿಗಾಗಿ ಗದ್ದೆಯಲ್ಲಿ ನಿಂತ ನೀರನ್ನು ಸಂಪೂರ್ಣವಾಗಿ ಬಸಿದು ತೆಗೆಯಬೇಕು. ಅಧಿಕ ಸಾರಜನಕಯುಕ್ತ ರಸಗೊಬ್ಬರಗಳನ್ನು ಕೊಡಬಾರದು. 1ಗ್ರಾಂ ಕಾರ್ಬನ್ಡೈಜಿಂ ಅಥವಾ 1ಮಿ.ಲೀ. ಕಿಟಾಜಿನ್ ಪ್ರತಿ ಲೀಟರ್ಗೆ ನೀರಿಗೆ ಬೆರಸಿ ಸಿಂಪಡಿಸಬೇಕು. ರೋಗದ ತೀವ್ರತೆ ಜಾಸ್ತಿಯಾದಲ್ಲಿ ಟ್ರೈಸೈಕ್ಲೋಜೋಲ್ ೦.6ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಹೆಚ್ಚಿನ ವಿವರಗಳಿಗಾಗಿ ಸಮೀಪದ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು.
Author : ಚಂದ್ರಲೇಖಾ ರಾಕೇಶ್
Share :
More Articles From Agriculture & Environment