ಬದನೆ ಬೆಳೆಯ ಕಾಂಡ ಕೊರಕ ಹಾಗೂ ಕಾಯಿ ಕೊರಕ ರೋಗಕ್ಕೆ ಜೈವಿಕ ತಂತ್ರಜ್ನಾದ ಮೂಲಕ ಪರಿಹಾರವೊಂದನ್ನು ಕಂಡುಹಿಡಿಯಲಾಗಿದೆ. ಇದೇನಿದು ಅಂದ್ಕೊಂಡ್ರಾ.... ಹೌದು. ಬದನೆ ಬೆಳೆಯ ಕಾಂಡ ಕೊರಕ ಹಾಗೂ ಕಾಯಿ ಕೊರಕ ಹುಳುವಿನ ನಿಯಂತ್ರಣ ಸಾಧ್ಯ, ಎಂದು ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಕೀಟಶಾಸ್ತ್ರ ವಿಭಾಗದ ವಿಜ್ನಾನಿಗಳು ಸಾಬೀತು ಮಾಡಿದ್ದಾರೆ.
ಪರೋಪ ಜೀವಿಯಾದ ಟ್ರೈಕೋಗ್ರಾಮ ಕಿಲ್ಲೋನಿಸ್ ಹಾಗೂ ಬ್ರಾಸಿಲಸ್ ಟುರೆನ್ ಜೆನಿಸ್ ಎಂಬ ದ್ರಾವಣವನ್ನು ಸಿಂಪಡಿಸುವುದರಿಂದ ಕೊರಕ ಹುಳುವಿನ ಮೊಟ್ಟೆ ಹಾಗೂ ತೆವಳುವ ಹುಳುವನ್ನು ನಿಯಂತ್ರಿಸಬಹುದು. ಗಿಡ ನಾಟಿ ಮಾಡಿದ 1ತಿಂಗಳ ನಂತರ ಟ್ರೈಕೋಗ್ರಾಮ ಕಿಲ್ಲೋನಿಸ್ ಎಂಬ ಪರೋಪಜೀವಿಯನ್ನು ಹಾಕಬೇಕು ಎಂದು ವಿಜ್ನಾನಿ ಡಾ.ಗಂಗಾ ವಿಶಾಲಾಕ್ಷಿ ತೀಳಿಸಿದ್ದಾರೆ.
ಬದನೆ ಹೂವಿನ ಪ್ರಮಾಣ ಹೆಚ್ಚಾಗಿದ್ದಾಗ ಬ್ರಾಸಿಲಸ್ ಟುರೆನ್ ಜೆನಿಸ್ ದ್ರಾವಣವನ್ನು 10ದಿನಗಳ ಅಂತರದಲ್ಲಿ ಪ್ರತಿ ಲೀಟರ್ ನೀರಿಗೆ ಒಂದು ಎಂ.ಎಲ್ ನಂತೆ 2 ಬಾರಿ ಸಿಂಪಡಿಸಬೇಕು. ಈ ವಿಧಾನದಿಂದ ಕಾಯಿಕೊರಕ ಹುಳುವಿನ ಸಂಖ್ಯೆಯು ಶೇ. 75ರಿಂದ 95ರವರೆಗೆ ಕಡಿಮೆಯಾಗಿ ಫಸಲು ಚನ್ನಾಗಿ ಬರುತ್ತದೆ. ಈ ವಿಧಾನವನ್ನು ಎಲ್ಲ ಜಾತಿಯ ಬದನೆ ಬೆಳೆಯಲ್ಲಿ ಕಾಂಡ ಮತ್ತು ಕಾಯಿಕೊರಕ ಹುಳುವಿನ ನಿಯಂತ್ರಣಕ್ಕಾಗಿ ಬಳಸಬಹುದು ಎಂದು ಅವರು ತಿಳಿಸುತ್ತಾರೆ.
ಬೆಂಗಳೂರು ಹಾಗೂ ಸುತ್ತಮುತ್ತಲಿನ ಕೆಲ ಪ್ರದೇಶಗಳಲ್ಲಿನ ಬದನೆ ತೋಟಗಳಲ್ಲಿ ಈಗಾಗಲೇ ಈ ವಿಧಾನಗಳನ್ನು ಅಳವಡಿಸಲಾಗಿದ್ದು, ಕಾಯಿಕೊರಕ ಹುಳುಗಳನ್ನು ನಿಯಂತ್ರಿಸಲಾಗಿದೆ ಎಂದು ಅವರು ವಿವರಿಸುತ್ತಾರೆ.
ಕೀಟನಾಶಕಗಳ ಉಪಯೋಗಕ್ಕಾಗಿ ಪ್ರತಿ ವಾರ ಸುಮಾರು 1000-1500 ರೂ ಖರ್ಚಾಗುತ್ತದೆ. ಆದರೆ ಜೈವಿಕ ತಂತ್ರಜ್ನಾನ ವಿಧಾನದಿಂದ 150-200 ರೂ ಮಾತ್ರ ಖರ್ಚಾಗಲಿದೆಯಂತೆ.
ಅಲ್ಲದೇ ಈ ಸಂಸ್ಥೆಯಲ್ಲಿ ಅಧಿಕ ಪ್ರಮಾಣದಲ್ಲಿ ಪರೋಪಜೀವಿಗಳನ್ನು ಉತ್ಪಾದನೆ ಮಾಡುತ್ತಿದ್ದು, ರೈತರಿಗೆ ಕಡಿಮೆ ಬೆಲೆಯಲ್ಲಿ ಕೊಡಲು ಯೋಜಿಸಲಾಗಿದೆ. ಅಲ್ಲದೇ ಆಸಕ್ತಿಯುಳ್ಳ ರೈತರಿಗೆ ಈ ರೀತಿಯ ಜೈವಿಕ ತಂತ್ರಜ್ನಾನ ಹಾಗೂ ಜೀವಿಯ ಉತ್ಪತ್ತಿ ಮಾಡುವ ವಿಧಾನಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ.
ಈ ತಂತ್ರಜ್ನಾನಗಳನ್ನು ಕಡಿಮೆ ಖರ್ಚಿನಲ್ಲಿ ಅಧಿಕ ರೈತರು ಅಳವಡಿಸಿಕೊಳ್ಳುವುದರಿಂದ ಅಧಿಕ ಲಾಭವಿದ್ದು, ಯಾವುದೇ ರಾಸಾಯನಿಕಗಳಿಲ್ಲದೇ ಜೈವಿಕ ಕೀಟ ನಿಯಂತ್ರಣದಿಂದ ಪರಿಸರ ರಕ್ಷಣೆಯನ್ನೂ ಮಾಡಬಹುದು ಎಂಬುದು ಇಲ್ಲಿನ ವಿಜ್ನಾನಿಗಳ ಅಭಿಪ್ರಾಯ.