ಹೆಚ್ಚುವರಿ ಶುಲ್ಕ ಸಮಸ್ಯೆಯನ್ನು ಬಗೆಹರಿಸದೇ ಈ ವರ್ಷ ಸರ್ಕಾರ ವೃತ್ತಿಪರ ಕೋರ್ಸ್ ಗಳ ಸೀಟು ಹಂಚಿಕೆ ಮಾಡಿರುವ ಸರ್ಕಾರದ ಕ್ರಮದಿಂದ ಸರ್ಕಾರಿ ಸೀಟು ಪಡೆದ ಅಭ್ಯರ್ಥಿಗಳು ಖಾಸಗಿ ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರ್ಕಾರ ಹೆಚ್ಚುವರಿ ಶುಲ್ಕದ ಸಮಸ್ಯೆ ಬಗೆಹರಿಸುವ ಸಂಬಂಧ ಯಾವುದೇ ನಿರ್ಧಾರವನ್ನೂ ಕೈಗೊಳ್ಲದೇ ಜುಲೈ 10ರಂದು ಮೊದಲ ಹಂತದ ಸೀಟು ಪ್ರಕಟಿಸಿದೆ. ಇದರಿಂದಾಗಿ ವೈದ್ಯಕೀಯ, ದಂತವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಸರ್ಕಾರಿ ಸೀಟು ಪಡೆದ ಅಭ್ಯರ್ಥಿಗಳು ತಮಗೆ ದೊರೆತ ಕಾಲೇಜುಗಳಿಗೆ ತೆರಳಿ ದಾಖಲಾತಿ ಪಡೆಯುತ್ತಿದ್ದು, ಖಾಸಗಿ ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕದ ಹೊರೆ ದೊರೆಯುತ್ತಿದೆ.
ಇದರಿಂದಾಗಿ ಸರ್ಕಾರ ನಿಗಧಿ ಪಡಿಸಿದ ಶುಲ್ಕವನ್ನು ಮಾತ್ರ ಪಾವತಿಸಿದರಾಯಿತು ಎಂದು ಕೊಂಡಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಭಾರಿ ಆಘಾತ ಉಂಟಾಗಿದೆ. ದಾಖಲಾತಿ ಪಡೆಯಲು ಹೋದ ಅಭ್ಯರ್ಥಿಗಳಿಗೆ ಖಾಸಗಿ ಕಾಲೇಜುಗಳು ಟ್ಯೂಷನ್, ಇಂಟರ್ ನೆಟ್, ಬೋಧನಾ ಶುಲ್ಕ, ವಿಶ್ವವಿದ್ಯಾಲಯ ಶುಲ್ಕ, ವಿಶೇಷ ಸೌಲಭ್ಯ ಎಂಬ ಹೆಸರಿನಲ್ಲಿ ಸುಮಾರು 20-30 ಸಾವಿರ ರೂ ವರೆಗಿನ ಹೆಚ್ಚುವರಿ ಶುಲ್ಕದ ಉದ್ದದ ಪಟ್ಟಿಯನ್ನು ನೀಡುತ್ತಿವೆ.
ಅಭ್ಯರ್ಥಿಗಳು ಸೀಟು ದೊರೆತ ಕಾಲೇಜಿನಲ್ಲಿ ಜುಲೈ 15ರೊಳಗೆ ಸರ್ಕಾರಿ ಶುಲ್ಕ ಪಾವತಿಸಿ ಕಾಲೇಜಿನಲ್ಲಿ ದಾಖಲಾತಿ ಪಡೆದು, ಸರ್ಕಾರಕ್ಕೆ ಮಾಹಿತಿ ನೀಡಬೇಕು. ಹೀಗಿದ್ದಲ್ಲಿ ಮಾತ್ರ ಅಭ್ಯರ್ಥಿ ಸೀಟು ಖಾತ್ರಿಯಾಗುತ್ತದೆ.
ಇದರಿಂದಾಗಿ ಸರ್ಕಾರಿ ಕೋಟಾದಡಿ ಸೀಟು ಪಡೆದ ಹಲವು ಅಭ್ಯರ್ಥಿಗಳು ಸೀಟು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಪೋಷಕರು ಸಾಲ ಮಾಡಿ ತಮ್ಮ ಮಕ್ಕಳ ಓದಿಗಾಗಿ ಸರ್ಕಾರಿ ಸೀಟಿಗೆ ಹಣ ಪಾವತಿಸಲು ಸಿದ್ಧರಾಗಿದ್ದರೆ, ಖಾಸಗಿ ಕಾಲೇಜುಗಳು ಗಾಯದ ಮೇಲೆ ಬರೆ ಎಳೆದಂತೆ ಹೆಚ್ಚುವರಿ ಶುಲ್ಕ ಕೇಳುತ್ತಿರುವುದು ವಿಪರ್ಯಾಸವೇ ಸರಿ. ಈ ಕುರಿತು ಸರ್ಕಾರ ಶೀಘ್ರದಲ್ಲಿ ಕ್ರಮ ಕೈಗೊಂಡು ಅಭ್ಯರ್ಥಿಗಳ ಅಳಲನ್ನು ಆಲಿಸಬೇಕಿದೆ.