ಸಾಂದರ್ಭಿಕ ಚಿತ್ರ
ಆಧಾರ್ ಕಾರ್ಡ್ ಸಂಖ್ಯೆ ಕಡ್ಡಾಯಗೊಳಿಸಿರುವುದು ರಾಜ್ಯದಲ್ಲಿನ ಹಲವು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ದೊರೆಯಬೇಕಾದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಕಷ್ಟಕರವಾಗಿದೆ. ಕೇಂದ್ರ ಸರ್ಕಾರದ ಇಲಾಖೆಗಳಿಂದ ದೊರೆಯುವ ವಿದ್ಯಾರ್ಥಿ ವೇತನಕ್ಕೆ ಆಧಾರ್ ಸಂಖ್ಯೆ ಕಡ್ದಾಯಗೊಳಿಸಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲಾ ಕೇಂದ್ರಗಳಲ್ಲಿ ಸೀಮಿತ ಸಂಖ್ಯೆಯ ಆಧಾರ್ ಕೇಂದ್ರಗಳಲ್ಲಿ ಮಾತ್ರ ಕಾರ್ಡ್ ಗಳು ಸಿಗುತ್ತಿದ್ದು, ಇದರಿಂದ ವಿಳಂಬವಾಗುತ್ತಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಈ ವರ್ಷ ವಿದ್ಯಾರ್ಥಿ ವೇತನದಿಂದ ವಂಚಿತರಾಗುವ ಭಯದಲ್ಲಿದ್ದಾರೆ.
ಬೀಡಿ ಕಾರ್ಮಿಕರ ಮಕ್ಕಳಿಗೆ ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿ ವೇತನ ಲಭ್ಯವಿದೆ, ಕೇಂದ್ರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ನೈರ್ಮಲ್ಯ ವೃತ್ತಿ ಮಾಡುವ ಪೋಷಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮೆರಿಟ್ ಅಪ್ ಗ್ರೆಡೇಷನ್ ವಿದ್ಯಾರ್ಥಿ ವೇತನ ಸೇರ್ದಂತೆ ಹಲವು ರೀತಿಯ ವಿದ್ಯಾರ್ಥಿ ವೇತನಗಳು ಲಭ್ಯವಿದೆ.
ಆದರೆ ಜಿಲ್ಲಾ ಕೇಂದ್ರಗಳಲ್ಲಿ ಆದಾರ್ನೋಂದಣಿ ಕೇಂದ್ರಗಳ ಸಂಖ್ಯೆ ಕಡಿಮೆಯಿರುವುದರಿಂದ ವಿದ್ಯಾರ್ಥಿಗಳಿಗೆ ಶೀಘ್ರದಲ್ಲಿ ಅಧಾರ್ ಸಂಖ್ಯೆಗಳು ಸಿಗುತ್ತಿಲ್ಲ. ಇರುವ ಕೇಂದ್ರಗಳಲ್ಲೇ ವಿದ್ಯಾರ್ಥಿಗಳಿಗಾಗಿ ಆಧಾರ್ ಕಾರ್ಡ್ ನೀಡುವ ಬಗ್ಗೆ ಪ್ರತ್ಯೇಕ ವ್ಯವಸ್ಥೆ ಮಾಡುವ ಕಾರ್ಯವನ್ನು ಜಿಲ್ಲಾಡಳಿತ ಮಾಡುತ್ತಿಲ್ಲ. ಇದರಿಂದಾಗಿ ಕಾರ್ಮಿಕರ ಮಕ್ಕಳು ಹಾಗೂ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾರ್ಥಿ ವೇತನಕ್ಕೆ ಪ್ರತಿ ವರ್ಷ ಒಂದೊಂದೇ ನಿಯಮಗಳನ್ನು ಅಳವಡಿಸಿ, ಸರ್ಕಾರ ಷರತ್ತುಗಳನ್ನು ಅಳವಡಿಸುತ್ತಲೇ ಬಂದಿದೆ. ಇದಕ್ಕೆ ಸ್ಪಷ್ಟ ಉದಾಹರಣೆಗಳೆಂದರೆ 2010 ಕ್ಕೂ ಮೊದಲು ಬೀಡಿ ಕಾರ್ಮಿಕರ ಮಕ್ಕಳಿಗೆ ಕಾರ್ಮಿಕ ಇಲಾಖೆಯ ಪ್ರಾದೇಶಿಕ ಕಛೇರಿ ಮೂಲಕ ವಿದ್ಯಾರ್ಥಿ ವೇತನ ಬಿದುಗಡೆಯಾಗುತ್ತಿತ್ತು. ಅದಾದ ಬಳಿಕ ಹಣ ಚೆಕ್ ರೂಪದಲ್ಲಿ ವಿದ್ಯಾರ್ಥಿಗಳ ಕೈ ಸೇರುತ್ತಿತ್ತು.
ನಂತರ 2010ರಲ್ಲಿ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಯಿತು. 2011ರಲ್ಲಿ ಬ್ಯಾಂಕ್ ನ ಐಎಫ್ ಎಸ್ ಸಿಕೋಡ್ ಬೇಕು ಎಂದು ಷರತ್ತು ವಿಧಿಸಲಾಯಿತು. 2012ರಲ್ಲಿ ಎಂಐಸಿಆರ್ ಕೋಡ್ ಬೇಕು ಎಂದು ಹೇಳಲಾಯಿತು. ಈಗ 2013ರಲ್ಲಿ ಆಧಾರ್ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ.
ಇದೆಲ್ಲ ಷರತ್ತುಗಳು ಸಮಂಜಸವೆ ಇರಬಹುದು. ಅದರೆ ಕೇಂದ್ರದ ನಿಯಮಗಳನ್ನು ಅನುಸರಿಸಲು ಪೂರಕವಾಗುವಂತೆ ರಾಜ್ಯ ಸರ್ಕಾರ ವ್ಯವಸ್ಥೆ ಕಲ್ಪಿಸಬೇಕಾಗಿದ್ದು ಕರ್ತವ್ಯ. ಈ ನಿಟ್ಟಿನಲ್ಲಿ ಸರ್ಕಾರ ಆಧಾರ್ ಸಂಖ್ಯೆ ಕಡ್ಡಾಯ ಎಂಬ ಷರತ್ತಿಗೆ ಸರ್ಕಾರ ಈ ವರ್ಷ ವಿನಾಯತಿ ನೀಡಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರಿಗೆ ಆಧಾರ್ ಕೇಂದ್ರದಲ್ಲಿ ಆದ್ಯತೆ ನೀಡುವುದು. ಅಥವಾ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಆಧಾರ್ ಕೇಂದ್ರ ತೆರೆಯುವುದು. ಅದೂ ಇಲ್ಲವೆಂದರೆ ಜಿಲ್ಲೆಗಳಲ್ಲಿ ಆಧಾರ್ ಕೇಂದ್ರಗಳನ್ನು ಹೆಚ್ಚಿಸುವುದು. ಈ ಬಗ್ಗೆ ಸರ್ಕಾರ ಶೀಘ್ರ ಕಾರ್ಯ ಪ್ರವೃತ್ತವಾಗುವ ಅಗತ್ಯವಿದೆ ಎಂದು ಕಾರ್ಮಿಕ ಸಂಘಟನೆ ಹಾಗೂ ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.