ಸಾಂದರ್ಭಿಕ ಚಿತ್ರ
ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಚಿಣ್ಣರ ಅಂಗಳದಲ್ಲಿ ವಿಶೇಷವಾಗಿ ತರಬೇತಿ ನೀಡಿ, ವಯೋಮಿತಿಗೆ ಅನುಗುಣವಾಗಿ ತರಗತಿಗೆ ದಾಖಲಿಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಹೌದು. ಅರ್ಧಕ್ಕೆ ಶಾಲೆಗೆ ಬರುವುದನ್ನು ನಿಲ್ಲಿಸಿದ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಸರ್ವಶಿಕ್ಷಣ ಅಭಿಯಾನದ ಮಹತ್ವದ ಕಾರ್ಯಕ್ರಮ ಚಿಣ್ಣರ ಅಂಗಳದಡಿ ವಿಶೇಷ ತರಬೇತಿ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ತರಬೇತಿಗಾಗಿ ಈ ಬಾರಿ 11,995 ಮಕ್ಕಳನ್ನು ಆಯ್ಕೆ ಮಾಡಲಾಗಿದೆ.
2013-14ನೇ ಸಾಲಿನಲ್ಲಿ 7ರಿಂದ 14 ವರ್ಷದ ವಯಸ್ಸಿನ 22,741 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಶಿಕ್ಷಣ ಇಲಾಖೆ ಅಂದಾಜಿಸಿದೆ. ಇವರಲ್ಲಿ 11,995 ಮಕ್ಕಳಿಗೆ ಚಿಣ್ಣರ ಅಂಗಳದಲ್ಲಿ ವಿಶೇಷ ತರಬೆತಿ ನೀಡಿ ಮತ್ತೆ ಶಾಲೆಗೆ ಸೇರಿಸಲು ಇಲಾಖೆ ಸಜ್ಜಾಗಿದೆ.
ಶಾಲೆಯಿಂದ ಹೊರಗುಳಿದ 10,743 ಮಕ್ಕಳಿಗೆ ಎನ್ ಸಿ ಎಲ್ ಪಿ(ರಾಷ್ಟ್ರೀಯ ಬಾಲ ಕಾರ್ಮಿಕ ಕಾರ್ಯಕ್ರಮ) ಮದರಸಾ, ಟೆಂಟ್ ಶಾಲೆಗಳು, ಹಿಂದುಳಿದ ವರ್ಗಗಳ ವಸತಿ ಶಾಲೆಗಳಲ್ಲಿ ದಾಖಲಿಸಿ ತರಬೇತಿ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಬೇಕಾಗುವ ಅಗತ್ಯ ಕಾರ್ಯಕ್ರಮಗಳ ಬಗ್ಗೆಯೂ ಯೋಜನೆ ರೂಪಿಸಲಾಗುತ್ತಿದೆ.
ಚಿಣ್ಣರ ಅಂಗಳ:
ಕಡ್ಡಾಯ ಶಿಕ್ಷಣ ಕಾಯ್ದೆ-2009ರ ಪ್ರಕಾರ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಚಿಣ್ಣರ ಅಂಗಳ ಎಂಬ ಯೋಜನೆಯನ್ನು ರೂಪಿಸಿತು. ಇದರ ಪ್ರಕಾರ ಮಕ್ಕಳ ವಯಸ್ಸಿಗನುಗುಣವಾಗಿ ಔಪಚಾರಿಕ ಶಾಲೆಗಳ ಮೂಲಕ ಕನಿಷ್ಠ ಕಲಿಕಾ ತರಬೇತಿ ನೀಡಲಾಗುತ್ತದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಜಿಲ್ಲಾ ಭಾಗಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಗನುಗುಣವಾಗಿ ವಸತಿ ಸಹಿತ ಹಾಗೂ ವಸತಿ ರಹಿತ ಔಪಚಾರಿಕ ಶಾಲೆಗಳ ಮೂಲಕ ತರಬೇತಿಯುಳ್ಳ ಶಿಕ್ಷಕರಿಂದ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಈ ಕಾರ್ಯಕ್ರಮವೇ 'ಚಿಣ್ಣರ ಅಂಗಳ’
ಏ.15 ರಿಂದ ಜುಲೈ 14ರ ವರೆಗೆ ಮೂರು ತಿಂಗಳ ಕಾಲ ಚಿಣ್ಣರ ಅಂಗಳ ಕಾರ್ಯಕ್ರಮ ನಡೆಯಲಿದೆ. ಪ್ರತಿ ಜಿಲ್ಲೆಯ ಯಾವ ಭಾಗದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳಿರುತ್ತಾರೋ ಆ ಭಾಗದಲ್ಲೇ ಬೋಧನಾ ಕೇಂದ್ರಗಳನ್ನು ತೆರೆಯಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ. ಚಿಣ್ಣರ ಅಂಗಳದಲ್ಲಿ ಕಲಿಯುವ ಪ್ರತಿ ಮಗುವಿಗೆ ಕಲಿಕಾ ಸಾಮಗ್ರಿ, ಊಟ, ಪ್ರವಾಸ ಸೇರಿದಂತೆ 1,500 ರಿಂದ 5,000ರೂ ವರೆಗೆ ವೆಚ್ಚಮಾಡಲಾಗುತ್ತಿದೆ. ಒಂದು ಕೇಂದ್ರಕ್ಕೆ ಮೂರು ಸ್ವಯಂ ಸೇವಕರನ್ನು ನೇಮಕ ಮಾಡಲಾಗುತ್ತದೆ. ಮೂರು ತಿಂಗಳ ತರಬೇತಿ ಬಳಿಕ ಮಕ್ಕಳು ಮತ್ತೆ ಶಾಲೆ ತೊರೆಯದಂತೆ ಎಚ್ಚರ ವಹಿಸಲಾಗುತ್ತದೆ.
ಚಿಣ್ಣರ ಅಂಗಳ ಕಾರ್ಯಕ್ರಮದಲ್ಲಿ ಕಳೆದ ವರ್ಷ ಅಂದರೆ 2011-12ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಹಲವು ಮಕ್ಕಳನ್ನು ಗುರುತಿಸಿ ಶಾಲೆಗೆ ಮತ್ತೆ ಕರೆತರಲಾಗಿತ್ತು. 2011-12ನೇ ಸಾಲಿನಲ್ಲಿ 39,841 ಮಕ್ಕಳಲ್ಲಿ 30,000ಕ್ಕೂ ಹೆಚ್ಚು ಮಕ್ಕಳಿಗೆ ತರಬೇತಿ ನೀಡಿ ಶಾಲೆಗೆ ಮರಳಿ ತರಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಒಟ್ಟಿನಲ್ಲಿ ಚಿಣ್ಣರ ಅಂಗಳ ಕಾರ್ಯಕ್ರಮದ ಮೂಲಕ ಶಿಕ್ಷಣ ಇಲಾಖೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕಾರ್ಯ ಮಾಡುತ್ತಿದ್ದು, ಬಡ, ಶಿಕ್ಷಣ ವಂಚಿತ ಮಕ್ಕಳಿಗೆ ಇದು ಸಹಾಯವಾಗುವುದರಲ್ಲಿ ಎರಡು ಮಾತಿಲ್ಲ.