ರಾಜ್ಯಪಾಲರಿಂದ 17 ಚಿನ್ನದ ಪದಕಗಳನ್ನು ಸ್ವೀಕರಿಸುತ್ತಿರುವ ಡಾ.ಸಂತೋಷ್
ಇವರು ಡಾ.ಸಂತೋಷ್ ನಾರಾಯಣನ್. ಮಂಗಳೂರಿನ ಎ.ಜೆ ವೈದ್ಯಕೀಯ ವಿಜ್ನಾನ ಕಾಲೇಜಿನವರಾದ ಸಂತೋಷ್ ಚಿನ್ನದ ಪದಕಗಳ ಸರದಾರರಾಗಿ ಸಾಧನೆ ಗೈದಿದ್ದಾರೆ. ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಯಾವ ವಿದ್ಯಾರ್ಥಿಗಳೂ ಪಡೆಯದಷ್ಟು ಚಿನ್ನದ ಪದಕಗಳನ್ನು ಪಡೆದ ಖ್ಯಾತಿಗೆ ಪಾತ್ರರಾಗಿದ್ದಾರೆ.
ಮಾರ್ಚ್ 25ರಂದು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವ ಬೆಂಗಳೂರಿನ ನಿಮಾನ್ಸ್ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ 45ವಿದ್ಯಾರ್ಥಿಗಳಿಗೆ 70ಚಿನ್ನದ ಪದಕ, 34 ಅಭ್ಯರ್ಥಿಗಳಿಗೆ ಪಿ ಹೆಚ್ ಡಿ ಪ್ರದಾನ, 27,512 ವಿದ್ಯಾರ್ಥಿಗಳಿಗೆ ಪದವಿಗಳನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪ್ರದಾನ ಮಾಡಿದರು.
ಮಂಗಳೂರಿನ ಎ.ಜೆ ಇನ್ಸಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಡಾ.ಸಂತೋಷ್ ನಾರಾಯಣನ್ 17 ಚಿನ್ನದ ಪದಕ ಪದೆದಿದ್ದು ವಿಶೇಷವಾಗಿತ್ತು. ರಾಜ್ಯಪಾಲರಿಂದ ಚಿನ್ನದ ಪದಕಗಳನ್ನು ಪಡೆದು ಅದನ್ನು ಹರಿವಾಣದಲ್ಲಿ ಹೊತ್ತು ಬರುತ್ತಿದ್ದ ಕ್ಷಣ ಎಲ್ಲರನ್ನು ಅರೆಗಳಿಗೆ ನಿಬ್ಬೆರಗಾಗಿಸಿತ್ತು. ವಿದ್ಯಾರ್ಥಿಗಳಂತೂ ಸೋಜಿಗದಿಂದ ಕಣ್ಣರಳಿಸಿ ಸಂತೋಷ್ ನತ್ತ ಚಿತ್ತ ಹರಿಸಿದ್ದರು.
ಅಂಗರಚನಾ ಶಾಸ್ತ್ರ, ಶಸ್ತ್ರ ಚಿಕಿತ್ಸೆ, ರೋಗ ನಿದಾನ ಶಾಸ್ತ್ರ, ಔಷಧಿ ಶಾಸ್ತ್ರ,ಚಿಕ್ಕಮಕ್ಕಲ ರೋಗಶಾಸ್ತ್ರ ಸೇರಿದಂತೆ ಎಲ್ಲ ವಿಷಯಗಳಲ್ಲೂ ಮೊದಲಿಗರಾಗಿ ಸಾಧನೆಗೈದು, 17 ಚಿನದ ಪದಕಗಳನ್ನು ಬಾಚಿಕೊಂಡಿದ್ದು ನಿಜಕ್ಕೂ ಒಂದು ತಪಸ್ಸೇ ಸರಿ.
ಪ್ರಶಸ್ತಿ-ಪದಕಗಳ ನಿರಿಕ್ಷೆಯಿರಲಿಲ್ಲ ಎಂದ ಸಂತೋಷ್ ವೈದ್ಯರ ಸೇವೆ ಕೇವಲ ನಗರಗಳಿಗೆ ಮಾತ್ರ ಸೀಮಿತವಾಗಿರಬಾರದು. ಗ್ರಾಮಸ್ಥರ ಪ್ರದೇಶಗಳಲ್ಲೂ ದೊರೆಯಬೇಕು. ಈ ಉದ್ದೇಶದಿಂದ ಗ್ರಾಮೀಣ ಭಾಗಗಳಲ್ಲಿ ಸೇವೆಗೆ ಸಿದ್ದರಿರುವುದಾಗಿ ತಿಳಿಸಿದರು.
ಕುಟುಂಬದ ಪ್ರೋತ್ಸಾಹವೇ ಈ ಯಶಸ್ಸಿಗೆ ಕಾರಣವಾಗಿದ್ದು, ಈ ಪ್ರಶಸ್ತಿಗಳ ಯಶಸ್ಸಿನ ಶ್ರೇಯ ಪಾಲಕರಿಗೆ ಸಲ್ಲಬೇಕು. ಬಹುಮಾನಗಳ ಕುರಿತು ಯೋಚಿಸಬೇಡ. ನಿನ್ನ ಪಾಡಿಗೆ ನೀನು ಅಭ್ಯಾಸಮಾಡು ಆಗ ತಾನಾಗಿಯೇ ಬಹುಮಾನಗಳು ನಿನ್ನರಸಿ ಬರುತ್ತದೆ ಎಂದು ತಂದೆ ಹೇಳಿದ್ದರು ಅದು ಈಗ ನಿಜವಾಗಿದೆ ಎಂದು ನುಡಿಯುವಾಗ ಕಣ್ಣಂಚಿನಲ್ಲಿ ಆನಂದ ಭಾಷ್ಪ... ಕ್ಯಾನ್ಸರ್ ಗೆ ಸೂಕ್ತ ಚಿಕಿತ್ಸೆ ಕಂಡು ಹಿಡಿಯುವ ಸಂಶೋಧನೆ ನಡೆಸುವ ಮೂಲಕ ಉತ್ತಮ ತಜ್ನನಾಗಬೇಕೆಂಬುದು ನನ್ನ ಗುರಿ ಎಂದು ನುಡಿದರು.
ಮೂಲತಹ ಕೇರಳದ ಕಲ್ಲಿಕೋಟೆಯವರಾದ ಸಂತೋಷ್ ಅವರದ್ದು ವೈದ್ಯರ ಕುಟುಂಬ. ತಂದೆ ಡಾ.ಲಕ್ಷ್ಮೀನಾರಾಯಣನ್, ತಾಯಿ ಡಾ.ಗೋಮತಿ. ಸಹೋದರಿ ಹಾಗು ಭಾವ ಕೂಡ ವೈದ್ಯರು.
ಇದೇ ವೇಳೆ ಮಂಗಳೂರಿನ ಡಾ. ಎ ಬಿ ಶೆಟ್ಟಿ ಸ್ಮಾರಕ ದಂತ ವಿಜ್ನಾನ ಕಾಲೇಜಿನ ಡಾ.ಬಿ ರುಚಿ ರಮೇಶ್ 4ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಕಡಲನಗರಿಯಲ್ಲಿ ಸಂತಸದ ಅಲೆ ಮೂಡಿಸಿದ್ದಾರೆ.