Untitled Document
Sign Up | Login    
ಆರ್ ಟಿ ಇ ಕಾಯ್ದೆ ಉಲ್ಲಂಘನೆಯಾಗುತ್ತಿದೆಯೇ ಶಾಲೆಗಳಲ್ಲಿ....

ಸಾಂದರ್ಭಿಕ ಚಿತ್ರ

2012-13ನೇ ಸಾಲಿನಿಂದ ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ(ಆರ್ ಟಿ ಇ)ಅನುಷ್ಠಾನಕ್ಕೆ ಬಂದಿದೆ. ಈ ಕಾಯ್ದೆ ಪ್ರಕಾರ ಯುಕೆಜೆಯಿಂದ ಹಿಡಿದು 8ನೇ ತರಗತಿವರೆಗೆ ಯಾವುದೇ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವಂತಿಲ್ಲ. ಉತ್ತೀರ್ಣ- ಅನುತ್ತೀರ್ಣ ಎಂದು ಫಲಿತಾಂಶಗಳನ್ನು ನಿರ್ಧರಿಸುವಂತಿಲ್ಲ. ಆದರೆ ಈಗಾಗಲೇ ಎಲ್ಲ ಸ್ಕೂಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ಮುಗಿದಿದ್ದರೆ, ಇನ್ನು ಕೆಲ ಶಾಲೆಗಳಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಶಿಕ್ಷಣ ಹಕ್ಕು ಕಾಯ್ದೆಯನ್ನು ಗಾಳಿಗೆ ತೂರಲಾಗಿದೆಯೇ ಎಂಬ ಅನುಮಾನ ಪ್ರಾರಂಭವಾಗಿದೆ.

ಇಷ್ಟು ವರ್ಷದಂತೆ ಈ ವರ್ಷವೂ ಪರೀಕ್ಷೆಗಳು ನಡೆದಿವೆ. ಆದರೆ 8ನೇ ತರಗತಿವರೆಗೆ ಫಲಿತಾಂಶವನ್ನು ಪ್ರಕಟಿಸುವಂತಿಲ್ಲ ಎಂಬುದು ಆರ್ ಟಿ ಇ ನಿಯಮ. ಹಾಗೊಂದು ವೇಳೆ ಉತ್ತೀರ್ಣ-ಅನುತ್ತೀರ್ಣ ಎಂದು ಪ್ರಕಟಿಸಿದರೆ ಅದು ಆರ್ ಟಿ ಇ ಕಾಯ್ದೆ ಉಲ್ಲಂಘನೆ ಮಾಡಿದಂತಾಗುತ್ತದೆ. ಹೀಗಾಗಿ ಯುಕೆಜಿಯಿಂದ ಹಿಡಿದು 8ನೇ ತರಗತಿವರೆಗೆ ಶಾಲೆಗಳು ಗೊಂದಲಕ್ಕೆ ಸಿಲುಕಿದಂತಾಗಿವೆ.
ಆರ್ ಟಿ ಇ ಕಾಯ್ದೆ ಸೆಕ್ಷನ್ 30(1)ರ ಪ್ರಕಾರ ಯಾವುದೇ ಮಗು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವ ತನಕ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣವಾಗುವ ಅಗತ್ಯವಿಲ್ಲ. ಅಲ್ಲದೇ ಆರ್ ಟಿ ಇ ಕಾಯ್ದೆ ಸೆಕ್ಷನ್ 16ರ ಪ್ರಕಾರ ಯಾವುದೇ ಮಗುವನ್ನು ಯಾವ ಕಾರಣಕ್ಕೂ ಯಾವ ತರಗತಿಯಲ್ಲೂ ಅನುತ್ತೀರ್ಣಗೊಳಿಸುವಂತಿಲ್ಲ. ಪ್ರಾಥಮಿಕ ಶಿಕ್ಷಣ ಪೂರ್ಣಗೊಳ್ಳುವವರೆಗೆ ಶಾಲೆಯಿಂದ ಹೊರಹಾಕುವಂತಿಲ್ಲ. ಕಾಯ್ದೆ ಸೆಕ್ಷನ್ 29(ಹೆಚ್) ರ ಪ್ರಕಾರ ಪ್ರತಿ ಮಗುವಿಗೂ ಶೈಕ್ಷಣಿಕ ವರ್ಷದ ಆರಂಭದಲ್ಲೇ ಕಲಿಕೆ ಬಗ್ಗೆ ನಿರಂತರ-ಸಮಗ್ರ ಮೌಲ್ಯಮಾಪನ(ಸಿಸಿಇ) ಮಾಡಬೇಕು. ಅಂದರೆ ತರಗತಿಯಲ್ಲಿ ದಿನಂಪ್ರತಿ ಮಗುವೊಂದು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹೇಗೆ ಸ್ಪಂದಿಸುತ್ತದೆ, ಮಗುವಿನ ಪ್ರಗತಿ ಹೇಗಿದೆ, ಮಾನಸಿಕ, ದೈಹಿಕ, ಬೌದ್ಧಿಕವಾಗಿ ಮಗು ಬೆಳವಣಿಗೆ ಸಾಧಿಸುತ್ತಿದೆಯೇ ಎಂಬುದನ್ನು ನಮೂದಿಸಬೆಕಾಗುತ್ತದೆ.

ಅಧ್ಯಾಪಕರು ಪ್ರತಿ ಮಕ್ಕಳ ಕಲಿಕಾ ಸಾಮರ್ಥ್ಯ-ಪ್ರಗತಿಯನ್ನು ವಾರದಲ್ಲಿ ಒಮ್ಮೆ ಮೌಲ್ಯಮಾಪನ ಮಾಡಿ ಗ್ರೇಡ್ ಗಳನ್ನು ನೀಡಬೆಕು ಎಂಬ ನಿಯಮವಿದೆ. ಆದರೆ ಪ್ರಸ್ತುತವಾಗಿ ಕೆಲ ಬೆರಳೆಣಿಕೆಯಷ್ಟು ಶಾಲೆಗಳನ್ನು ಬಿಟ್ಟು ಉಳಿದ ಶಾಲೆಗಳು ಸಿಸಿಇ ಕಲಿಕಾ ಕ್ರಮ ಪಾಲಿಸುತ್ತಿಲ್ಲ. ಇದಕ್ಕೆ ಆರ್ ಟಿ ಇ ಬಗ್ಗೆ ಬಹುತೇಕ ಶಾಲಾ ಶಿಕ್ಷಕರಿಗೆ ಸಮಗ್ರ ತಿಳುವಳಿಕೆಯಿಲ್ಲದಿರುವುದು ಒಂದು ಕಾರಣವಿರಬಹುದು ಎಂಬದು ಕೆಲವರ ವಾದ.

ಆದರೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಆರ್ ಟಿ ಇ ಪ್ರಕಾರ ಯಾವುದೇ ಪ್ರಾಥಮಿಕ ಶಾಲೆಗಳಲ್ಲಿ ಪರೀಕ್ಷೆಗಳನ್ನು ನಡೆಸಬಾರದು ಎಂದು ಎಲ್ಲಾ ಶಾಲೆಗಳಿಗೂ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ನಿಯಮ ಮೀರಿ ವರ್ತಿಸಿದರೆ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲಾಗುವುದಲ್ಲದೇ ಪೋಷಕರೂ ಅಂತಹ ಶಾಲೆಗಳ ವಿರುದ್ಧ ಡಿಡಿಪಿಐಗೆ ದೂರು ನೀಡಬಹುದು ಎಂದು ಹೇಳಿದ್ದಾರೆ.

 

Author : ಲೇಖಾ ರಾಕೇಶ್

More Articles From Education & Career

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited