ಸಾಂದರ್ಭಿಕ ಚಿತ್ರ
2012-13ನೇ ಸಾಲಿನಿಂದ ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ(ಆರ್ ಟಿ ಇ)ಅನುಷ್ಠಾನಕ್ಕೆ ಬಂದಿದೆ. ಈ ಕಾಯ್ದೆ ಪ್ರಕಾರ ಯುಕೆಜೆಯಿಂದ ಹಿಡಿದು 8ನೇ ತರಗತಿವರೆಗೆ ಯಾವುದೇ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವಂತಿಲ್ಲ. ಉತ್ತೀರ್ಣ- ಅನುತ್ತೀರ್ಣ ಎಂದು ಫಲಿತಾಂಶಗಳನ್ನು ನಿರ್ಧರಿಸುವಂತಿಲ್ಲ. ಆದರೆ ಈಗಾಗಲೇ ಎಲ್ಲ ಸ್ಕೂಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ಮುಗಿದಿದ್ದರೆ, ಇನ್ನು ಕೆಲ ಶಾಲೆಗಳಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಶಿಕ್ಷಣ ಹಕ್ಕು ಕಾಯ್ದೆಯನ್ನು ಗಾಳಿಗೆ ತೂರಲಾಗಿದೆಯೇ ಎಂಬ ಅನುಮಾನ ಪ್ರಾರಂಭವಾಗಿದೆ.
ಇಷ್ಟು ವರ್ಷದಂತೆ ಈ ವರ್ಷವೂ ಪರೀಕ್ಷೆಗಳು ನಡೆದಿವೆ. ಆದರೆ 8ನೇ ತರಗತಿವರೆಗೆ ಫಲಿತಾಂಶವನ್ನು ಪ್ರಕಟಿಸುವಂತಿಲ್ಲ ಎಂಬುದು ಆರ್ ಟಿ ಇ ನಿಯಮ. ಹಾಗೊಂದು ವೇಳೆ ಉತ್ತೀರ್ಣ-ಅನುತ್ತೀರ್ಣ ಎಂದು ಪ್ರಕಟಿಸಿದರೆ ಅದು ಆರ್ ಟಿ ಇ ಕಾಯ್ದೆ ಉಲ್ಲಂಘನೆ ಮಾಡಿದಂತಾಗುತ್ತದೆ. ಹೀಗಾಗಿ ಯುಕೆಜಿಯಿಂದ ಹಿಡಿದು 8ನೇ ತರಗತಿವರೆಗೆ ಶಾಲೆಗಳು ಗೊಂದಲಕ್ಕೆ ಸಿಲುಕಿದಂತಾಗಿವೆ.
ಆರ್ ಟಿ ಇ ಕಾಯ್ದೆ ಸೆಕ್ಷನ್ 30(1)ರ ಪ್ರಕಾರ ಯಾವುದೇ ಮಗು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವ ತನಕ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣವಾಗುವ ಅಗತ್ಯವಿಲ್ಲ. ಅಲ್ಲದೇ ಆರ್ ಟಿ ಇ ಕಾಯ್ದೆ ಸೆಕ್ಷನ್ 16ರ ಪ್ರಕಾರ ಯಾವುದೇ ಮಗುವನ್ನು ಯಾವ ಕಾರಣಕ್ಕೂ ಯಾವ ತರಗತಿಯಲ್ಲೂ ಅನುತ್ತೀರ್ಣಗೊಳಿಸುವಂತಿಲ್ಲ. ಪ್ರಾಥಮಿಕ ಶಿಕ್ಷಣ ಪೂರ್ಣಗೊಳ್ಳುವವರೆಗೆ ಶಾಲೆಯಿಂದ ಹೊರಹಾಕುವಂತಿಲ್ಲ. ಕಾಯ್ದೆ ಸೆಕ್ಷನ್ 29(ಹೆಚ್) ರ ಪ್ರಕಾರ ಪ್ರತಿ ಮಗುವಿಗೂ ಶೈಕ್ಷಣಿಕ ವರ್ಷದ ಆರಂಭದಲ್ಲೇ ಕಲಿಕೆ ಬಗ್ಗೆ ನಿರಂತರ-ಸಮಗ್ರ ಮೌಲ್ಯಮಾಪನ(ಸಿಸಿಇ) ಮಾಡಬೇಕು. ಅಂದರೆ ತರಗತಿಯಲ್ಲಿ ದಿನಂಪ್ರತಿ ಮಗುವೊಂದು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹೇಗೆ ಸ್ಪಂದಿಸುತ್ತದೆ, ಮಗುವಿನ ಪ್ರಗತಿ ಹೇಗಿದೆ, ಮಾನಸಿಕ, ದೈಹಿಕ, ಬೌದ್ಧಿಕವಾಗಿ ಮಗು ಬೆಳವಣಿಗೆ ಸಾಧಿಸುತ್ತಿದೆಯೇ ಎಂಬುದನ್ನು ನಮೂದಿಸಬೆಕಾಗುತ್ತದೆ.
ಅಧ್ಯಾಪಕರು ಪ್ರತಿ ಮಕ್ಕಳ ಕಲಿಕಾ ಸಾಮರ್ಥ್ಯ-ಪ್ರಗತಿಯನ್ನು ವಾರದಲ್ಲಿ ಒಮ್ಮೆ ಮೌಲ್ಯಮಾಪನ ಮಾಡಿ ಗ್ರೇಡ್ ಗಳನ್ನು ನೀಡಬೆಕು ಎಂಬ ನಿಯಮವಿದೆ. ಆದರೆ ಪ್ರಸ್ತುತವಾಗಿ ಕೆಲ ಬೆರಳೆಣಿಕೆಯಷ್ಟು ಶಾಲೆಗಳನ್ನು ಬಿಟ್ಟು ಉಳಿದ ಶಾಲೆಗಳು ಸಿಸಿಇ ಕಲಿಕಾ ಕ್ರಮ ಪಾಲಿಸುತ್ತಿಲ್ಲ. ಇದಕ್ಕೆ ಆರ್ ಟಿ ಇ ಬಗ್ಗೆ ಬಹುತೇಕ ಶಾಲಾ ಶಿಕ್ಷಕರಿಗೆ ಸಮಗ್ರ ತಿಳುವಳಿಕೆಯಿಲ್ಲದಿರುವುದು ಒಂದು ಕಾರಣವಿರಬಹುದು ಎಂಬದು ಕೆಲವರ ವಾದ.
ಆದರೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಆರ್ ಟಿ ಇ ಪ್ರಕಾರ ಯಾವುದೇ ಪ್ರಾಥಮಿಕ ಶಾಲೆಗಳಲ್ಲಿ ಪರೀಕ್ಷೆಗಳನ್ನು ನಡೆಸಬಾರದು ಎಂದು ಎಲ್ಲಾ ಶಾಲೆಗಳಿಗೂ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ನಿಯಮ ಮೀರಿ ವರ್ತಿಸಿದರೆ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲಾಗುವುದಲ್ಲದೇ ಪೋಷಕರೂ ಅಂತಹ ಶಾಲೆಗಳ ವಿರುದ್ಧ ಡಿಡಿಪಿಐಗೆ ದೂರು ನೀಡಬಹುದು ಎಂದು ಹೇಳಿದ್ದಾರೆ.