ಪೈಲ್ ಚಿತ್ರ
ಮಾರ್ಚ್.8 ಶುಕ್ರವಾರ ವಿಶ್ವದೆಲ್ಲೆಡೆ ‘ಮಹಿಳಾ ದಿನ’ ಆಚರಿಸಲಾಗುತ್ತಿದೆ. ನಿತ್ಯದ ಕಾಯಕದಲ್ಲಿ ತೊಡಗಿಕೊಳ್ಳುತ್ತಲೇ ಬಾನಿನ ಆಚೆಗೆ ವಿಹರಿಸುವ, ಸ್ವತಂತ್ರವಾಗಿ ನಿರ್ಮಲ ಝರಿಯಂತೆ ಹರಿಯುವ ಕನಸು ಕಾಣುವ ಹೆಣ್ಣು ಕ್ರಮಿಸಬೇಕಾದ ಹಾದಿ ಸಾಗಿದಷ್ಟೂ ದೂರವಿದೆ ಎನಿಸುತ್ತಿದೆ.
ಆಧ್ಯಾತ್ಮ, ಶಿಕ್ಷಣ, ವಿಜ್ಞಾನ, ಸಾಹಿತ್ಯ, ಸಾಮಾಜಿಕ, ರಾಜಕೀಯ, ಸಂಶೋಧನೆ...ಯಾವುದೇ ಕ್ಷೇತ್ರವಿರಲಿ, ಕೈಗೆತ್ತಿಕೊಂಡ ಕಾರ್ಯವನ್ನು, ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ, ಜವಾಬ್ದಾರಿಯುತವಾಗಿ ನಿರ್ವಹಿಸುವವಳು ಹೆಣ್ಣು. ದೇಶದ ಹಲವೆಡೆ ಹೆಣ್ಣಿನ ಮೇಲಿನ ದೌರ್ಜನ್ಯಗಳ ವರದಿ ಕಂಗೆಡೆಸುವಂತಿದ್ದರೂ ಎಲ್ಲೆಡೆಯೂ ಕತ್ತಲಿರದು ಎಂಬಂತೆ ಮಹಿಳೆಯ ಏಳಿಗೆಗೆ ಶ್ರಮಿಸುವ ಪುರುಷರೂ ಇದ್ದಾರೆ ಎಂಬುದನ್ನು ಮರೆಯುವಂತಿಲ್ಲ.
ರಾಮಕೃಷ್ಣ ಪರಮಹಂಸರು-ಶಾರದಾ ದೇವಿ, ಅರಬಿಂದೋ-ಶ್ರೀಮಾತೆ, ಮಹಾತ್ಮಾ ಗಾಂಧಿ-ಕಸ್ತೂರಬಾ... ಹೀಗೆ ಒಬ್ಬರು ಮತ್ತೊಬ್ಬರ ಏಳಿಗೆಗೆ ಶ್ರಮಿಸಿದಂತಹ ಉದಾಹರಣೆಗಳೇ ಭಾರತದ ಹಲವು ಕುಟುಂಬಗಳ ಉನ್ನತಿಗೆ ಸ್ಫೂರ್ತಿಯಾಗಿದೆ. ಇಂದ್ರಿಯ ಸಂಯಮ ಸಾಧಿಸದ, ನೈತಿಕ ಶಿಕ್ಷಣ ಗಳಿಸದ ಅನಾಗರಿಕರು ಮಾತ್ರವೇ ಹೆಣ್ಣಿನ ಶೋಷಣೆಗೆ ಮುಂದಾಗುತ್ತಾರೆ ಎಂಬುದು ಸತ್ಯ. ಸರ್ಕಾರವೂ ಸಹ ಮಹಿಳೆಯರ ಸಬಲೀಕರಣಕ್ಕೆ, ಸುರಕ್ಷತೆಗೆ ಪೂರಕ ಯೋಜನೆಗಳನ್ನು ರೂಪಿಸುತ್ತಿರುವುದು ಸಮಾಧಾನಕರ ಸಂಗತಿ.
ಕುಟುಂಬವನ್ನು ಸಂಭಾಳಿಸುತ್ತಲೇ ಪದೋನ್ನತಿ, ಆತ್ಮೋನ್ನತಿಯ ಕನಸು ಹೊತ್ತಿರುವ ಸಾವಿರಾರು ಹೆಜ್ಜೆಗಳು ದಾಪುಗಾಲು ಹಾಕುತ್ತಿವೆ. ಅದೋ ಅಲ್ಲಿದೆ ಗುರಿ ಎಂದು ಹೇಳುವ ಗುರುವಿಗಾಗಿ, ಅಡಿಯಿಡುವಾಗಿ ಚುಚ್ಚದಿರಲೆಂದು ಮುಳ್ಳು ಸರಿಸುವ ಪ್ರಿಯತಮನಿಗಾಗಿ, ಇತ್ತ ಬಾ ಎಂದು ಮಾರ್ಗದರ್ಶನ ಮಾಡುವ ಆತ್ಮೀಯ ಗೆಳೆಯನಿಗಾಗಿ, ಕೊನೆಯವರೆಗೂ ನಿನ್ನೊಡನಿರುವೆ ಎಂದು ಮೆಲ್ಲುಲಿಯವ ಪತಿಗಾಗಿ ಆಕೆ ಕಾಯುತ್ತಿದ್ದಾಳೆ....