Untitled Document
Sign Up | Login    
ರಾಷ್ಟ್ರೀಯ ಮತದಾರರ ದಿನ

ರಾಷ್ಟ್ರೀಯ ಮತದಾರರ ದಿನ

ಮತದಾನ ಎಂಬುದು ಅಖಂಡ ಪ್ರಜಾ ಸಮೂಹದ ದನಿ. ಪ್ರತಿ ಪ್ರಜೆಯೂ ತನ್ನನ್ನು ಆಳುವ ಪ್ರತಿನಿಧಿಯನ್ನು ಆಯ್ಕೆಮಾಡಲು ಇರುವ ವ್ಯವಸ್ಥೆಯೇ ಮತದಾನ. ಪ್ರಜಾತಂತ್ರ ದೇಶದ ಪ್ರಜೆಗಳ ಪ್ರಮುಖ ಹಕ್ಕು ಇದು. ತಮ್ಮ ಒಳಿತನ್ನು ಬಯಸುವ ಜನಪರ ನಾಯಕನನ್ನು ತಾವೇ ಆಯ್ಕೆ ಮಾಡಿ ಕಳಿಸಲು ಮತದಾನ ಎಂಬ ಪ್ರಕ್ರಿಯೆ ಬೇಕು. ದೇಶಕ್ಕೆ ಒಳಿತುಮಾಡುವ ನಾಯಕನನ್ನು ಚುನಾಯಿಸುವುದು ಪ್ರಜೆಗಳ ಜವಾಬ್ದಾರಿ. ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಹೊಣೆಯ ಕುರಿತು ಜಾಗೃತಿ ಮೂಡಿಸುವುದಕ್ಕಾಗಿಯೇ ನಮ್ಮದೇಶದಲ್ಲಿ ಜ.25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.

ಹಿಂದೆ ರಾಜರ ಆಳ್ವಿಕೆಯ ಸಮಯದಲ್ಲಿ ತಮ್ಮ ರಾಜನನ್ನು ಆರಿಸಿಕೊಳ್ಳುವ ಅವಕಾಶ ಪ್ರಜೆಗಳಿಗೆ ಇರಲಿಲ್ಲ. ರಾಜ್ಯ ರಾಜ್ಯಗಳ ನಡುವಿನ ಕಲಹದಿಂದಾಗಿ, ಆಗಾಗ ಬದಲಾಗುವ ರಾಜರಿಂದ, ಜನಸಾಮಾನ್ಯನಿಗೆ ತನ್ನ ರಾಜ ಯಾರು, ತಾವು ಯಾವ ರಾಜ್ಯಕ್ಕೆ ಒಳಪಟ್ಟಿದ್ದೇವೆ ಇಂಬ ಪರಿವೆಯೂ ಇರುತ್ತಿರಲಿಲ್ಲ. ರಾಜಕೀಯ ವಿಚಾರದಲ್ಲಿ ಅಷ್ಟರ ಮಟ್ಟಿಗೆ ಪ್ರಜೆ ಕಡೆಗಣಿಸಲ್ಪಟ್ಟಿದ್ದ.

ನಂತರ ಬಂದ ಬ್ರಿಟೀಷರ ಆಳ್ವಿಕೆಯಲ್ಲಿಯೂ ಇದೇ ಪರಿಸ್ಥಿತಿ ಮುಂದುವರೆದಿತ್ತು. ಭಾರತೀಯ ಪ್ರಜೆಗಳು ಕಡೆಗಣಿಸಲ್ಪಟ್ಟರು. ಆದರೆ, ಯಾವಾಗ ನಮ್ಮದೇಶ ತನ್ನದೇ ಆದ ಸಂವಿಧಾನವನ್ನು ಸಿದ್ಧಪಡಿಸಿ, ಪ್ರಜಾತಂತ್ರ ವ್ಯವಸ್ಥೆಯನ್ನು ಜಾರಿಯಲ್ಲಿ ತಂದಿತ್ತೋ..ಆಗಲೇ ಭಾರತೀಯ ಪ್ರಜೆ ನಿಜವಾದ ಸ್ವಾತಂತ್ರ‍್ಯ ಪಡೆದ. ಜನತಂತ್ರ ವ್ಯವಸ್ಥೆಯಿಂದಾಗಿಯೇ ಪ್ರತಿ ಪ್ರಜೆಗೂ ಬೆಲೆ ಬಂತು. ಪ್ರಜೆಗಳ ನಿರ್ಣಯಕ್ಕೆ ಗೌರವ ಸಿಕ್ಕಿತ್ತು. ಅದೆಲ್ಲವೂ ಸಾಧ್ಯವಾಗಿದ್ದು ಮತದಾನ ಎಂಬ ಸಂವಿಧಾನದ ಒಂದು ಪ್ರಮುಖ ಅಂಗದ ಮೂಲಕವೇ.
2011ರ ವರ್ಷದಿಂದ ನಮ್ಮ ದೇಶದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಜ.25ನ್ನೇ ಆಯ್ಕೆ ಮಾಡಿಕೊಂಡಿರುವುದಕ್ಕೂ ಕಾರಣವಿದೆ. ಭಾರತದ ಚುನಾವಣಾ ಆಯೋಗ ಸ್ಥಾಪನೆಗೊಂಡದ್ದು 1950ರ ಜನವರಿ 25ನೆ ದಿನಾಂಕದಂದು. ಹೀಗಾಗಿ ಇದೇ ದಿನದಂದು ರಾಷ್ಟ್ರಿಯ ಮತದಾರರ ದಿನವನ್ನು ಆಚರಿಸಲು ಸರಕಾರ ನಿರ್ಧರಿಸಿತು.

18 ವರ್ಷಕ್ಕೆ ಮೇಲ್ಪಟ್ಟ ಎಲ್ಲ ಪ್ರಜೆಗಳೂ ಚುನಾವಣಾ ಸಂದರ್ಭದಲ್ಲಿ ಖಡ್ಡಾಯವಾಗಿ ಮತದಾನ ಮಾಡಬೇಕೆಂಬ ಸಂದೇಶ ಸಾರುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಂತ ನಗರ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗುತ್ತದೆ. ವಿದ್ಯಾವಂತರೇ ಹೆಚ್ಚಿರುವ ನಗರ ಪ್ರದೇಶದಲ್ಲಿ ಮತದಾನವನ್ನು ಕಡೆಗಣಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಜನತೆ ಹೆಚ್ಚುಹೆಚ್ಚು ವಿದ್ಯಾವಂತರಾದಂತೆ, ಮತದಾನದ ಕಡೆ ನಿರ್ಲಕ್ಷ್ಯಧೋರಣೆ ತೋರುತ್ತಿದ್ದಾರೆ.

ತಮ್ಮ ನಾಯಕರ ಬ್ರಷ್ಟಾಚಾರ, ಆಳುವ ಜನರಿಂದಲೇ ನಡೆಯುತ್ತಿರುವ ಲೂಟಿ, ಅನಾಚಾರವೇ ವಿಚಾರವಂತ ಪ್ರಜೆಗಳಲ್ಲಿ ಮತದಾನ, ಚುನಾವಣೆ ಕುರಿತ ಆಸಕ್ತಿಯನ್ನು ಕುಂದಿಸಿರಬಹುದು. ಆದರೆ ದೇಶವನ್ನು ಬದಲಾಯಿಸುವ ಶಕ್ತಿ ಪ್ರಜೆಗಳ ಕೈಯಲ್ಲೇ ಇದೆ. ಅರ್ಹ ಪ್ರತಿನಿಧಿಯನ್ನು ಚುನಾಯಿಸಿ ದೇಶದಲ್ಲಿ ನ್ಯಾಯಪರ ಸರಕಾರವನ್ನು ಜಾರಿಗೆ ತರುವ ಜವಾಬ್ದಾರಿ ಪ್ರಜೆಗಳಮೇಲಿದೆ ಎಂಬುದನ್ನು ಯಾವ ಪ್ರಜೆಯೂ ಮರೆಯಬಾರದು.
ಹಲವು ಆಮಿಷಗಳಿಂಗ ಮತದಾರರನ್ನು ಸೆಳೆದು ಗೆದ್ದುಬರುವ ಪ್ರಯತ್ನ ಅಭ್ಯರ್ಥಿಗಳಿಂದ ನಡೆಯುತ್ತದೆ. ಚುನಾವಣೆ ಹತ್ತಿರ ಬರುತ್ತಿರುವಾಗ, ಆಶ್ವಾಸನೆಗಳೂ ಹೆಚ್ಚುತ್ತಾ ಹೋಗುತ್ತದೆ. ಚುನಾವಣಾ ಪ್ರಚಾರಕ್ಕಾಗಿ ನಾನಾ ಪಕ್ಷಗಳಿಂದ ಏನೇ ಕಾರ್ಯಕ್ರಮಗಳೂ ನಡೆದರೂ ಮತದಾರರ ನಿಲುವು ಮಾತ್ರ ನಿರ್ದಿಷ್ಟವಾಗಿರಬೇಕು. ಜಾತಿ,ಧರ್ಮ,ಮೀರಿದ ನಿಜವಾದ ಜನಸೇವಕನನ್ನೇ ಆಯ್ಕೆ ಮಾಡಿ, ದೇಶದ ಅಭಿವೃದ್ಧಿಗೆ, ಜನರ ಒಳಿತಿಗೆ ಪರೋಕ್ಷವಾಗಿ ಮತದಾರರೇ ಕಾರಣರಾಗುತ್ತಾರೆ ಎಂಬುದು ಪ್ರತಿ ಮತದಾರನ ಗಮನದಲ್ಲಿರಬೇಕು.

ಮತದಾನ ಪ್ರಕ್ರಿಯೆಯಿಂದ ಅರಿವಿದ್ದೂ ದೂರ ಉಳಿಯುವ ವಿದ್ಯಾವಂತರನ್ನು ಹಾಗೂ ಅರಿವಿಲ್ಲದೆ ದೂರ ಉಳಿಯುವ ಅವಿದ್ಯಾವಂತರಿಗೆ ಮತದಾನ ಪವಿತ್ರ‍್ಯತೆಯ ಬಗ್ಗೆ ಅರಿವು ಮೂಡಿಸುವುದು ,18 ವರ್ಷ ತುಂಬಿದ ವಯಸ್ಕರಲ್ಲಿ ಮತದಾನದ ಹಕ್ಕು ಪಡೆಯುವಂತೆ ಸ್ಫೂರ್ತಿ ನೀಡುವುದು, ಪ್ರಜೆಗಳ ಹಕ್ಕಿನ ಕುರಿತು ಜಾಗೃತಿ ಮೂಡಿಸುವುದು ರಾಷ್ಟ್ರೀಯ ಮತದಾರರ ದಿನದ ಉದ್ದೇಶ. ಮತದಾರರಿಗೆ ಪ್ರಜಾಪ್ರಭುತ್ವದ ಅಗತ್ಯತೆ ಅನಿವಾರ್ಯತೆ ಯನ್ನು ಒತ್ತಿ ಹೇಳಿ ಪ್ರಬುದ್ಧ ಮತದಾರ ರಾಗಿ ಕಾರ್ಯನಿರ್ವಹಿಸುವಂತೆ ಉತ್ತೇಜಿಸುವುದು ಈ ದಿನಾಚರಣೆಯ ಗುರಿ.

ಇನ್ನು ಕೆಲವೇ ತಿಂಗಳಿನಲ್ಲಿ, ನಮ್ಮ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಎಲ್ಲ ಪ್ರಜೆಗಳೂ ಮತದಾನ ಮಾಡಿ, ನಾಯಕರ ಆಯ್ಕೆಯ ಜವಾಬ್ಧಾರಿಯನ್ನು ಸೂಕ್ತರೀತಿಯಲ್ಲಿ ನಿಭಾಯಿಸಲು ಪ್ರತಿಜ್ಞೆ ಮಾಡುವುದರ ಮೂಲಕ ‘ರಾಷ್ಟ್ರೀಯ ಮತದಾರರ ದಿನ’ವನ್ನು ಆಚರಿಸಬೇಕಿದೆ.

 

Author : ಅಮೃತಾ ಹೆಗಡೆ

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited