Untitled Document
Sign Up | Login    
ಶುಭ ತರಲಿ ಸಂಕ್ರಮಣ...

ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

ನವವರ್ಷದ ಆಗಮನವಾಗುತ್ತಿದ್ದಂತೆ ಬರುವ ಪ್ರಥಮ ಹಬ್ಬವೇ ಸಂಕ್ರಮಣ. ’ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡಿ’ ಎನ್ನುವ ಶುಭ ಆಶಯದೊಂದಿಗೆ ಸಂಕ್ರಾಂತಿ ಕಾಳನ್ನು ಹಂಚುತ್ತಾ ಖುಷಿ ಪಡುವ ದಿನ ಇದು. ಹೊಸ ಅಂಗಿತೊಟ್ಟು ಸಿಹಿತಿಂಡಿ ಮೆಲ್ಲುತ್ತಾ ಪರಸ್ಪರ ಶುಭಹಾರೈಸುತ್ತಾ ಕುಣಿದಾಡುವ ಮಕ್ಕಳಿಗಂತೂ ಸಂಕ್ರಾಂತಿ ಹಬ್ಬವೆಂದರೆ ಎಲ್ಲಿಲ್ಲದ ಖುಷಿ. ಅರಿಶಿಣ ಕುಂಕುಮ, ಉಡುಗೊರೆ, ಎಳ್ಳು-ಬೆಲ್ಲ ಕೊಟ್ಟು, ತಾವೂ ಪಡೆದು ಸಂಭ್ರಮಿಸುವ ಮಹಿಳೆಯರಿಗೂ ಇದೊಂದು ಸ್ನೇಹ ಸಂಬಂಧ ಬೆಸೆಯುವ ಸಂತಸದ ಹಬ್ಬ.

ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು, ಕಬ್ಬಿನ ತುಂಡುಗಳನ್ನು ಸಹ ಎಳ್ಳು ಬೆಲ್ಲದ ಜೊತೆ ಇಟ್ಟು ಮನೆಯಲ್ಲಿ ಬೀರಿ, ಹಂಚಿ ತಿಂದು ಸಂಭ್ರಮಿಸಲಾಗುತ್ತದೆ. ವರ್ಷಪೂರ್ತಿ ಮನೆಯ ತುಂಬಾ ಧಾನ್ಯ, ಸಂಪತ್ತು ತುಂಬಿರಲಿ ಎಂಬ ಸದಾಶಯ ಈ ಆಚರಣೆಯಲ್ಲಿದೆ. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ,ಒಣ ಕೊಬ್ಬರಿ,ಹುರಿಗಡಲೆ,ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು" ತಯಾರಿಸಲಾಗುತ್ತದೆ. ಎಳ್ಳು ದೇಹಕ್ಕೆ ತಂಪು ನೀಡುವ ವಸ್ತುವೂ ಹೌದು. ಉತ್ತರಾಯಣದ ಉಷ್ಣ ವಾತಾವರಣದಿಂದ ಆರೋಗ್ಯ ಕೆಡದಿರಲಿ ಎಂಬ ಉದ್ದೇಶ ಈ ಎಳ್ಳು ಬೆಲ್ಲ ಹಂಚುವ ಆಚರಣೆಯ ಹಿಂದಿದೆ. ಸಂಕ್ರಾಂತಿ, ಹುಗ್ಗಿ ಹಬ್ಬವೂ ಹೌದು. ಚಾಂದ್ರಮಾನದ ಪ್ರಕಾರ ಸಂಕ್ರಾಂತಿ ಹಬ್ಬ ಜನವರಿ 14 ಅಥವಾ 15 ರಂದು, ಬರುತ್ತದೆ.

’ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡಿ’
ದಕ್ಷಿಣಾಯಣ ಮುಗಿದು ಉತ್ತರಾಯಣ ಪ್ರಾರಂಭವಾಗುವ ಸಂದರ್ಭದಲ್ಲಿ ಸೂರ್ಯ ತನ್ನ ಪಥವನ್ನು ಬದಲಿಸುತ್ತಾನೆ. ಇದು ಚಳಿಗಾಲ ಮುಗಿದು ಮುಂಬರುವ ಬೇಸಿಗೆಯ ಮುನ್ಸೂಚನೆ. ಇಲ್ಲಿಂದ ಸೂರ್ಯ ಇನ್ನು ಆರು ತಿಂಗಳು ಉತ್ತರದ ದಿಕ್ಕಿನಲ್ಲಿ ಚಲಿಸುತ್ತಾನೆ. ಉತ್ತರಕ್ಕೆ ಹೆಚ್ಚು ಹೋದಂತೆಲ್ಲಾ ಹಗಲಿನ ಪ್ರಮಾಣ ಹೆಚ್ಚಾಗಿ ಇರುಳು ಕಮ್ಮಿಯಾಗುತ್ತಾ ಹೋಗುತ್ತದೆ. ಸೂರ್ಯನ ತಾಪ ಹೆಚ್ಚಾಗುತ್ತಾ ಬೇಸಗೆಯ ಆಗಮನವಾಗುತ್ತದೆ.

ಮಹಾಭಾರತದಲ್ಲಿಯೂ ಮಕರ ಸಂಕ್ರಮಣದ ಉಲ್ಲೇಖವಿದೆ. ಸಂಕ್ರಾತಿಯ ಸಂದರ್ಭದಲ್ಲಿ ಭೀಷ್ಮ ಪಿತಾಮಹ ಶರಶಯ್ಯೆಯ ಮೇಲೆ ಮಲಗಿ ಉತ್ತರಾಯಣದ ಬರುವಿಕೆಗೆ ಕಾದು, ಪ್ರಾಣ ತ್ಯಜಿಸುತ್ತಾನೆ. ಭಗೀರಥ ಮಹಾರಾಜನೂ ಉತ್ತರಾಯಣದಲ್ಲಿಯೇ ಗಂಗೆಯನ್ನು ಭೂಮಿಗೆ ತಂದು ಪಿತೃಗಳಿಗೆ ಗಂಗಾಜಲದ ತರ್ಪಣವನ್ನು ಕೊಡುತ್ತಾನೆ. ಹೀಗೆ ಮಕರ ಸಂಕ್ರಮಣ ಕಾಲಕ್ಕೆ ಪುರಾಣ, ಮಹಾಕಾವ್ಯಗಳಲ್ಲಿಯೂ ವಿಶೇಷ ಸ್ಥಾನ ನೀಡಲಾಗಿದೆ.
ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಆಚರಿಸಲ್ಪಡುವ ಹಬ್ಬ ಇದು. ಸಾಮಾನ್ಯವಾಗಿ ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಆಚರಿಸಲಾಗುತ್ತದೆ. ನಮ್ಮ ರಾಜ್ಯದಲ್ಲಿ ಈ ಹಬ್ಬಕ್ಕೆ ಸಂಕ್ರಮಣ ಎಂದು ಕರೆದರೆ, ತಮಿಳುನಾಡಿನಲ್ಲಿ ಪೊಂಗಲ್ಎಂದು ಸಂಭೋದಿಸಲಾಗುತ್ತದೆ. ಈ ಹಬ್ಬದ ವಿಶೇಷ ತಿನಿಸಾದ, ಹಾಲು ,ಬೆಲ್ಲ, ಅನ್ನವನ್ನು ಕುದಿಸಿ ಪೊಂಗಲ್ ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ತಾವೂ ಸವಿಯುತ್ತಾರೆ. ಹಲವೆಡೆ ಗೋಪೂಜೆಯೂ ನಡೆಯುತ್ತೆ. ಹಾಗೇ ಗೂಳಿಯನ್ನು ಪಳಗಿಸುವ ಆಟವನ್ನೂ ಏರ್ಪಾಟು ಮಾಡಿರುತ್ತಾರೆ. ಕೇರಳದಲ್ಲಂತೂ ಸಂಭ್ರಮವೋ ಸಂಭ್ರಮ. ಸ್ವಾಮಿ ಅಯ್ಯಪ್ಪ ತನ್ನ ಅಸಂಖ್ಯ ಭಕ್ತರಿಂದ ವಿಶೇಷವಾಗಿ ಪೂಜಿಸಲ್ಪಡುತ್ತಾನೆ. ಸಂಕ್ರಾಂತಿಯ ದಿನ ಗೋಚರಿಸುವ ಮಕರಜ್ಯೋತಿಯ ರೂಪದಲ್ಲಿ ಅಯ್ಯಪ್ಪ ಕಾಣಿಸಿಕೊಳ್ಳುತ್ತಾನೆ ಎಂಬ ನಂಬಿಕೆ ಇದೆ. ದೇಶದೆಲ್ಲಡೆಯಿಂದ ಅಯ್ಯಪ್ಪನ ಭಕ್ತರು ಕೇರಳದ ಶಬರೀಮಲೈಗೆ ಹೋಗಿ ಅಯ್ಯಪ್ಪನ ದರ್ಶನ ಮಾಡಿ ಪುನೀತರಾಗುತ್ತಾರೆ. ಗಾಳಿಪಟವನ್ನು ಹಾರಿಬಿಡುವುದು ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ಹಬ್ಬದಂದು ಆಚರಿಸುವ ವಿಶೇಷ ಆಚರಣೆ. ಮಹಾರಾಷ್ಟ್ರದಲ್ಲಿಯೂ ಎಳ್ಳನ್ನು ಹಂಚುವ ಸಂಪ್ರದಾಯವಿದೆ ಆದರೆ ಬಿಡಿ ಬಿಡಿ ಎಳ್ಳನ್ನು ಹಂಚದೆ, ಎಳ್ಳು ಉಂಡೆಯನ್ನು ಮಾಡಿ ಹಂಚುತ್ತಾರೆ. ಪಂಜಾಬ್, ಹರಿಯಾಣದಲ್ಲಿಯೂ ಸಂಕ್ರಾಂತಿ ’ಲೋಹರಿ’ ಎಂಬ ಹೆಸರಲ್ಲಿ ಆಚರಿಸಲ್ಪಡುತ್ತದೆ.

ಮನೆ ಮನೆಯಲ್ಲಿ ಸಂಭ್ರಮ ತಂದಿರುವ ಸಂಕ್ರಮಣ ಎಲ್ಲರಿಗೂ ಶುಭ ತರಲಿ ಹಾಗೂ ಎಳ್ಳು ಬೆಲ್ಲದ ಸಿಹಿಯಂತೆ ವರ್ಷಪೂರ್ತಿ ಸಿಹಿ ನಿಮ್ಮ ಜೊತೆಗಿರಲಿ ಎಂಬ ಹಾರೈಕೆ ನಮ್ಮದು.

 

Author : ಅಮೃತಾ ಹೆಗಡೆ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited