ಕಲೆಯಲ್ಲಿ ಅರಳಿದ ಪರಿಸರ ಜಾಗೃತಿ
ಪರಿಸರ ಜಾಗೃತಿಯ ಬಗ್ಗೆ ನಾವು ಅಲ್ಲಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಾಮ ಫಲಕ, ಜಾಹಿರಾತು, ಬೀದಿ ನಾಟಕ, ಘೋಷಣೆಗಳನ್ನು ಕಾಣುತ್ತೇವೆ ಕೇಳುತ್ತಿರುತ್ತೇವೆ. ಈ ಎಲ್ಲಾ ಮಾದ್ಯಮಗಳು ಜನರಿಗೆ ಪರಿಸರದ ಕುರಿತು ಕಾಳಜಿ ಮತ್ತು ಕೆಲವು ಸಮಸ್ಯೆಗಳ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಮಾಡುತ್ತವೆ.
ಮಂಗಳೂರಿನ ಹಂಪನಕಟ್ಟೆ ಬಳಿಯ ವೆನ್ಲಾಕ್ ಆಸ್ಪತ್ರೆಯ ಆವರಣ ಮತ್ತು ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಆವರಣದಲ್ಲಿ ಗೋಡೆಯ ಮೇಲೆ ಪರಿಸರದ ಬಗ್ಗೆ ಕಾಳಜಿಯನ್ನು ಸಾರುವ ಅನೇಕ ಅರ್ಥಪೂರ್ಣವಾದ ವಾಕ್ಯಗಳು ಕಂಡು ಬರುತ್ತವೆ. ರಸ್ತೆಯ ಪಕ್ಕದಲ್ಲಿ ಹೋಗುವಾಗ ಸಾರ್ವಜನಿಕರ ಗಮನ ಸೆಳೆಯುತ್ತವೆ.
ಉದಾಹರಣೆಗೆ "ನೆಲ ಜಲ ರಕ್ಷಣೆ ಪರಿಸರದ ಇಳೆಯ ರಕ್ಷಣೆ, "ಮನೆಗೊಂದು ಮರ ನೆಡಿ" "ಗಿಡ ಬೆಳಸಿ ಪರಿಸರ ಉಳಿಸಿ" ಹೀಗೆ ಆವರಣ ಗೋಡೆಯ ಉದ್ದಕ್ಕೂ ಗೋಡೆ ಬರಹಗಳಿವೆ. ಇಂತಹ ಬರಹಗಳು ಹಲವು ಕಡೆಗಳಲ್ಲಿ ಅಲ್ಲಲ್ಲಿ ಕಂಡು ಬರುವುದು ಸಾಮಾನ್ಯ. ಆದರೆ ಮಂಗಳೂರಿನ ಲಹರಿ ಕಲಾವಿದರಿಂದ ನೆಹರು ಯುವ ಕೇಂದ್ರ ಮಂಗಳೂರು ಹಾಗೂ ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಇವರ ಸಹಕಾರದಲ್ಲಿ ಇಲ್ಲಿನ ಗೋಡೆಗಳಲ್ಲಿ 'ವರ್ಲಿ ಪೇಂಟಿಂಗ್' ಮೂಡಿ ಬಂದಿದೆ.
ಇವರು ಕೇವಲ ಪರಿಸರ ಜಾಗೃತಿ ಮೂಡಿಸುವ ವಾಖ್ಯಗಳನ್ನು ಮಾತ್ರ ಬರೆದಿಲ್ಲ. ಅದರ ಜೊತೆಗೆ ಜಾನಪದ ಶೈಲಿಯ "ವರ್ಲಿ ಪೇಂಟಿಂಗ್" ಮೂಲಕ ಚಿತ್ರಗಳನ್ನು ವೈಶಿಷ್ಟ್ಯ ಪೂರ್ಣವಾಗಿ ಬಿಡಿಸಿದ್ದಾರೆ.
ಕೇವಲ ಗೋಡೆ ಬರಹ ಬರೆದರೆ ಅದನ್ನು ಅಷ್ಟಾಗಿ ಯಾರೂ ಒದುವವರಿಲ್ಲ ಆದ್ದರಿಂದ ವರ್ಲಿ ಪೇಂಟಿಂಗ್ ಮೂಲಕ ಜಾಗೃತಿ ಮೂಡಿಸಿ ಸಾರ್ವಜನಿಕರ ಮನ ಮುಟ್ಟುವಂತೆ ಕಲಾವಿದರು ತಮ್ಮ ನೈಪುಣ್ಯತೆ ಮೆರೆದಿರುವುದು ವಿಶೇಷ. ಅಲ್ಲದೇ ಈ ಚಿತ್ರಗಳು ತೈಲ ವರ್ಣದಲ್ಲಿ ಮೂಡಿ ಬಂದಿದೆ. ಚಿತ್ರದ ಅಕ್ಕ ಪಕ್ಕದಲ್ಲಿ ಪರಿಸರ ಜಾಗೃತಿಯ ಬರಹಹಳಿವೆ. ಸುಮಾರು ೫೦೦ ಮೀಟರ್ ಉದ್ದಕ್ಕೂ ಇರುವ ಈ ಆವರಣದ ಗೋಡೆಯಲ್ಲಿರುವ ತೈಲ ವರ್ಣದ ಚಿತ್ರಗಳು ಕರಾವಳಿಯ ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ಬಿಂಬಿಸಿವೆ.
ಜಾನಪದ ಆಚರಣೆಗಳು, ಭೂತದ ಕುಣಿತ, ಗದ್ದೆ ಬೇಸಾಯ. ಜಾನಪದ ಕುಣಿತಗಳು, ಯಕ್ಷಗಾನ ಸೇರಿದಂತೆ ಇನ್ನಿತರ ಚಿತ್ರಗಳನ್ನು ಇಲ್ಲಿ ಗಮನ ಸೆಳೆಯುತ್ತವೆ. ಪರಿಸರ ಜಾಗೃತಿಯ ಜೊತೆಗೆ ಕಲೆಯನ್ನು ಅಸ್ವಾದಿಸುವವರಿಗೆ, ಕಲಾವಿದರಿಗೆ ಕರಾವಳಿಯ ಅನೇಕ ಸಂಪ್ರದಾಯಗಳಿಗೆ ಇದೊಂದು ಕೈಗನ್ನಡಿಯಂತೆ ಅನಾವರಣಗೊಂಡಿದೆ.
Author : ತೇಜೇಶ್ವರ್ ಕುಂದಲ್ಪಾಡಿ
Share :
More Articles From Art & Culture