ಬೊಳ್ಳಾಜೆ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಒಂದು ನೋಟ
ನಮ್ಮ ಸುತ್ತಮುತ್ತ ಅನೇಕ ಶ್ರೀಮಂತ ಖಾಸಗಿ ಶಾಲೆಗಳನ್ನು ಕಾಣಬಹುದು. ಅವುಗಳು ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡುತ್ತಿರುವ ಕಾರ್ಖನೆಗಳಾಗುತ್ತಿರುವುದು ವಿಪರ್ಯಾಸವೇ ಸರಿ. ಇಂತಹ ಶಾಲೆಗಳು ಪ್ರತಿ ವರ್ಷ ನೂರಕ್ಕೆ ನೂರು ಫಲಿತಾಂಶ ದಾಖಲಿಸುವುದೇ ತಮ್ಮ ಮಖ್ಯ ಗುರಿಯಾನ್ನಾಗಿಸಿಕೊಂಡಿವೆ. ಆದರೆ ಸುಳ್ಯ ತಾಲ್ಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎ.ವಿ.ಶ್ಯಾಮಲ ಮಾತ್ರ ಪರಿಸರ ಕಾಳಜಿ ಮತ್ತು ಸಾಮಾನ್ಯ ಜ್ಞಾನದ ವಿಷಯಗಳನ್ನು ಬೋಧಿಸುತ್ತಾರೆ . ಇಲ್ಲಿ ಪರಿಣಾಮಕಾರಿ ಬೋಧನೆ ಮಾಡುತ್ತಿರುವ ಕಾರಣ ಇಲ್ಲಿಯ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಮುಂದಿದ್ದಾರೆ.
ಇದು ಹಳ್ಳಿ ಶಾಲೆಯಾದರೂ ಪಟ್ಟಣದ ಶಾಲೆಗಳನ್ನೂ ನಾಚಿಸುವಂತಿದೆ.ಮಕ್ಕಳಿಗೆ ಪರಿಸರ ಜಾಗೃತಿಯ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಲಾಗುತ್ತಿದೆ. ಮಳೆ ನೀರನ್ನು ಇಂಗಿಸಿ ಮತ್ತು ಶೇಖರಿಸಿ ಬೇಸಿಗೆ ಕಾಲದಲ್ಲಿ ಅದನ್ನು ಶಾಲಾ ಕೈತೋಟಕ್ಕೆ ಹಾಗೂ ಇತರ ಕೆಲಸ ಕಾರ್ಯಗಳಿಗೆ ಉಪಯೋಗಿಸಲಾಗುತ್ತಿದೆ. ಇದರಿಂದ ನೀರಿನ ಅಗತ್ಯತೆ, ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಕಲಿಸಲಾಗುತ್ತದೆ.
ಶಾಲೆಯ ಪ್ರತಿಯೊಂದು ತರಗತಿಯಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಶಾಲೆಗೆ ಹಾಜರಾಗದ ವಿದ್ಯಾರ್ಥಿಗಳ ವಿವರ
ಅಲ್ಲದೆ ಶಾಲೆಯ ಎದುರಿನ ಗೋಡೆಯಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಧರ್ಪಣವಿದ್ದು ಇದರಲ್ಲಿ ವಿದ್ಯಾರ್ಥಿಗಳು ಬಿಡಿಸಿದ ಚಿತ್ರ. ಕತೆ, ಕವನ ಇತರ ಪ್ರತಿಭೆಗಳನ್ನು ಪ್ರದರ್ಶನ ಮಾಡಿ ಪ್ರೋತ್ಸಾಹ ನೀಡಲಾಗುತ್ತಿದೆ. ಶಾಲೆಯ ಎದುರಿನ ಗೋಡೆಯಲ್ಲಿ ಪ್ರತಿಯೊಂದು ತರಗತಿಯಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಶಾಲೆಗೆ ಹಾಜರಾಗದ ವಿದ್ಯಾರ್ಥಿಗಳ ವಿವರ ಬರೆಯಲಾಗುತ್ತಿದೆ. ಗ್ರಾಮದಲ್ಲಿ ಜನವಸತಿ ಹೆಚ್ಚು ಇರುವ ಸ್ಥಳವನ್ನು ನಕ್ಷೆ ಮೂಲಕ ಚಿತ್ರಿಸಿ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತಿದೆ.
ತಾಲೂಕಿನ ಕುಗ್ರಾಮದಲ್ಲಿರುವ ಈ ಶಾಲೆಯನ್ನು 1953ರಲ್ಲಿ ತೆರೆಯಲಾಯಿತು. 1955ರಲ್ಲಿ ಸರ್ಕಾರದ ಮಂಜುರಾತಿ ದೊರೆಯಿತು. ಪ್ರಥಮ ಮುಖ್ಯ ಶಿಕ್ಷಕರಾಗಿ ಪಾರೆ ಶಿವರಾಮಯ್ಯ ಸೇವೆ ಸಲ್ಲಿಸಿದರು. ಸ್ಥಳಿಯರಾದ ಅನಂತ ಭಟ್ ಸ್ಥಳ ದಾನ ಮಾಡಿದ ಕಾರಣ ಈಗ ಶಾಲೆಗೆ ಸ್ವಂತ ಒಂದೂವರೆ ಏಕರೆ ಜಾಗವಿದೆ. ಶಾಲೆ ಸ್ಥಾಪನೆ ಮಾಡಲು ಬೆಟ್ಟ ಈಶ್ವರ ಭಟ್ ಹೆಚ್ಚು ಪರಿಶ್ರಮ ವಹಿಸಿದ್ದರು. 1996 ರಿಂದ ಶಾಲಾಭಿವೃದ್ದಿ ದೃಷ್ಟಿಯಿಂದ ಶ್ರೀ ಶಾರದಾ ವಿದ್ಯಾವರ್ಧಕ ಸಂಘವನ್ನು ಸ್ಥಾಪನೆ ಮಾಡಲಾಯಿತು. ದಿ.ಪಾರೆ ಶಿವರಾಮಯ್ಯ ಸಂಚಾಲಕರಾಗಿ, ಪಿ.ರಾಜರಾಮ್ ಭಟ್ ಆಡಳಿತ ಸಮಿತಿ ಅಧ್ಯಕ್ಷರಾಗಿ, ಅನಂತ ಭಟ್ ಕನಿಯಾಲ ಸಂಚಾಲಕರಾಗಿ, ಯಂ.ವೆಂಕಟ್ರಮಣಯ್ಯ ಮಾಪಲಕಜೆ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಶ್ರೀ ಶಾರದಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಯಂ.ಬಿ.ಸದಾಶಿವ, ಉಪಾಧ್ಯಕ್ಷರಾಗಿ ಶುಭಕರ ನಾಯಕ್ ಶಾಲಾ ಸಂಚಾಲಕರಾಗಿ ಹರಿಣಿ ಸದಾಶಿವ ಕಾರ್ಯದರ್ಶಿಯಾಗಿ ಅನಂತ ಭಟ್ ಕನಿಯಾಲ, ಕೋಶಧಿಕಾರಿಯಾಗಿ ಎಂ.ವೆಂಕಟ್ರಮಣ ಸೇವೆ ಸಲ್ಲಿಸುತ್ತಿದ್ದಾರೆ.
ಶಾಲೆಯಲ್ಲಿ ಒಟ್ಟು ಈಗ ಮೂರು ಮಂದಿ ಶಿಕ್ಷಕರಿದ್ದರೂ ಅವರಲ್ಲಿ ಇಬ್ಬರು ಗೌರವ ಶಿಕ್ಷಕರು. ಇವರಲ್ಲಿ ಒಬ್ಬರಿಗೆ ಶಿಕ್ಷಕಿ ಶ್ಯಾಮಲ ಮತ್ತು ಇನ್ನೊಬ್ಬರಿಗೆ ಶ್ರೀ ಶಾರದಾ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಯಂ.ಬಿ.ಸದಾಶಿವ ಗೌರವಧನ ನೀಡುತ್ತಿದ್ದಾರೆ. ಶಾಲೆಗೆ ಸರ್ಕಾರದ ವತಿಯಿಂದ ನಾಲ್ಕು ಶಿಕ್ಷಕರ ಹುದ್ದೆ ಮಂಜೂರು ಗೊಂಡರು ಅದು ಇನ್ನೂ ಭರ್ತಿಯಾಗಿಲ್ಲ. ಪ್ರತಿವರ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿದ್ಯಾರ್ಥಿವೇತನ ದೊರಕಿಸಿಕೊಡಲಾಗುತ್ತಿದೆ. ಆರು ಮತ್ತು ಏಳನೇಯ ತರಗತಿಯ ಪರಿಶಿಷ್ಟ ವರ್ಗದ ವಿದ್ಯಾರ್ಥಿನಿಯರಿಗೆ ಸಮಾಜ ಕಲ್ಯಾಣ ವತಿಯಿಂದ ಪ್ರೋತ್ಸಾಹ ಧನ ದೊರಕಿಸಿ ಕೊಡಲಾಗುತ್ತಿದೆ. ಹಿಂದುಳಿದ ವಿದ್ಯಾರ್ಥಿಗಳಿಗೆ ತಾಲ್ಲೂಕು ಪಂಚಾಯತಿಯಿಂದ ಪ್ರೋತ್ಸಾಹ ಧನ ದೊರಕಿಸಿಕೊಡಲಾಗುತ್ತಿದೆ.
ಈ ಶಾಲೆ ಕನ್ನಡ ಮಾಧ್ಯಮವಾದ ಕಾರಣ ಇಲ್ಲಿಗೆ ದಾಖಲುಗೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷ ಕಡಿಮೆಯಾಗುತ್ತಿದ್ದು ಶಾಲೆಯನ್ನು ಮುಚ್ಯುವ ಭೀತಿ ಕಾಡುತ್ತಿದೆ.