ಭತ್ತದ ಮುಡಿ
ನಮ್ಮ ಪೂರ್ವಿಕರು ಬಳಸುತ್ತಿದ್ದ ಅನೇಕ ವಸ್ತುಗಳು, ಸಲಕರಣೆಗಳು ಇಂದು ಕಣ್ಮರೆಯಾಗುತ್ತಿವೆ. ನಮ್ಮ ಸಂಸ್ಕೃತಿಯ ಪಳೆಯುಳಿಕೆಗಳಾದ ಕೆಲ ಪಿಠೋಪಕರಣಗಳು, ಸಲಕರಣೆಗಳು ಆಧುನಿಕತೆಯ ಹೊಸತನದ ಅಬ್ಬರಕ್ಕೆ ಸಿಲುಕಿ ಮಾಯವಾಗುತ್ತಿವೆ.
ಹಿಂದಿನ ಕಾಲದಲ್ಲಿ ನಮ್ಮ ಮುತ್ತಾತ-ಮುತ್ತಜ್ಜಿ,ಅಷ್ಟೇ ಏಕೆ ತಾತ-ಅಜ್ಜಿ ಮನೆಗಳಲ್ಲಿ ಬಳಸುತ್ತಿದ್ದ ಭತ್ತದ ಕಣಜ, ಕಡಿಕೆ, ಒರಳುಕಲ್ಲು, ಕಡಗೋಲು, ಅಡಕೊಚ್ಚು ಹೀಗೆ ಹಲವಾರು ವಸ್ತುಗಳು ಇಂದು ಕಾಣಲು ಸಾಧ್ಯವಿಲ್ಲ. ಕೆಲವೊಂದು ಕಂಡು ಬಂದರೂ ಅದಕ್ಕೆ ಈಗಿನ ಕಾಲಕ್ಕೆ ಬೇಕಾದಂತೆ ಆಧುನಿಕ ಟಚ್ ನೀಡಲಾಗುತ್ತಿದೆ.
ಅಂತಹ ಒಂದು ವಿಶೇಷ ಸಾಧನ ಇಲ್ಲಿದೆ. ಅದೇ ಭತ್ತದ ಕಡಿಕೆ.
ಕೆಲ ವರ್ಷಗಳ ಹಿಂದೆ ಕರಾವಳಿ ತೀರದ ಭಾಗಗಳಲ್ಲಿ ಭತ್ತ ಕೃಷಿಯೇ ಪ್ರಮುಖವಾಗಿತ್ತು. ಎಲ್ಲಿ ನೋಡಿದರೂ ಹಸಿರಿನಿಂದ ಕೂಡಿದ ಗದ್ದೆಗಳು. ಕಣ್ಮನ ಸೆಳೆಯುತ್ತಿದ್ದವು. ಕಣ್ಣು ಹಾಯಿಸಿದಷ್ಟು ದೂರ ಭತ್ತದ ಗದ್ದೆಗಳದೇ ಮನಮೋಹಕ ದೃಶ್ಯದ ಸೊಬಗು ಕಂಡುಬರುತ್ತಿತ್ತು.ಆ ಹೊತ್ತಿಗೆ ಗೇಣಿಗೆ ಪದ್ದತಿ ಜಾರಿಯಲ್ಲಿತ್ತು.ಕೆಲ ರೈತರು ತಮ್ಮಗೆ ಸೇರಿದ ಭೂಮಿಯಲ್ಲಿ ತಾವೇ ಬೇಸಾಯ ಮಾಡುತ್ತಿದ್ದರೆ, ಇನ್ನೂ ಕೆಲವರು ತಾವು ಇತರರ ಭೂಮಿಯನ್ನು ಗೇಣಿಗೆ ಪಡೆದುಕೊಂಡು ಭತ್ತ ಬೆಳೆಯುತ್ತಿದ್ದರು.
ಬೆಳೆದ ಭತ್ತವನ್ನು ಆ ಕಾಲದಲ್ಲಿ ಊಟಕ್ಕೆ ಬಳಸಿ,ಉಳಿದದ್ದನ್ನು ಮಾರಾಟ ಮಾಡಿ ಮಿಕ್ಕಿದ ಭತ್ತವನ್ನು ಸಂರಕ್ಷಿಸಿ ಇಡುವುದು ಅಷ್ಟೇ ಕಷ್ಟವಾಗಿತ್ತು.ಈಗಿನ ಕಾಲದ ಹಾಗೆ ಗುಳಿಗೆ,ಪೌಡರು ಆಗ ದೊರೆಯುತ್ತಿರಲಿಲ್ಲ.ರೈತರು ತಾವು ತಯಾರಿಸಿದ ಕಡಿಕೆ(ಭತ್ತ ತುಂಬಿಸಿಡಲು ಮರ ಮತ್ತು ಬಿದಿರು ಅಥಾವ ಬೆತ್ತದಿಂದ ಮಾಡಿದ ಸಾಧನ)ಅಲ್ಲದೆ ರೈತರೆ ತಯಾರಿಸಿದ ಇತರ ಸಾಧನ ಬಳಸುತ್ತಿದ್ದರು. ಈ ಕಡಿಕೆಯಲ್ಲಿ ಒಂದು ವರ್ಷಕ್ಕಾಗುವಷ್ಟು ಭತ್ತವನ್ನು ತುಂಬಿ ಇಡಲಾಗುತ್ತಿತ್ತು.
"ಕಡಿಕೆ" ಬೆತ್ತ ಅಥವಾ ಬಿದಿರಿನಿಂದ ಮಾಡಿರುವ ಒಂದು ಸಾಧನ. ಇದನ್ನು "ಕಣಜ" ಎಂತಲೂ ಕರೆಯುತ್ತಾರೆ. ಕಡಿಕೆಯ ಹೊರ ಭಾಗದಲ್ಲಿ ಸಗಣಿಯಿಂದ ಸಾರಿಸಲಾಗುತ್ತಿತ್ತು. ಇದರಿಂದಾಗಿ ಭತ್ತಕ್ಕೆ ಹುಳ-ಕೀಟಗಳು ತಗುಲುತ್ತಿರಲಿಲ್ಲ.
ಆದರೆ ಇಂದಿನ ಆಧುನಿಕ ಕೃಷಿ ಪದ್ದತಿಗಳು,ಸಲಕರಣೆಗಳು ರೈತನ ಜೀವನ ಪದ್ದತಿಯನ್ನೆ ಬದಲಾಯಿಸುತ್ತಿದೆ.ಜತೆಗೆ ರೈತರ ಹಿಂದಿನ ಕಾಲದ ಜೀವನ ಈಗ ಕಾಣಲು ಸಿಗುತ್ತಿಲ್ಲ.ಇದರಿಂದ ಬೇಸಾಯಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಕಾಣುವುದು ಬಹಳ ಅಪರೂಪ.ಹಿಂದಿನ ಕಾಲದಲ್ಲಿ ರೈತರು ಭತ್ತ ತುಂಬಿಸಿಡಲು ಬಳಸುತ್ತಿದ್ದ ಕಡಿಕೆ ಕೂಡ ರೈತರ ಮನೆಯಲ್ಲಿ ಕಣ್ಮರೆಯಾಗಿವೆ.